‘ಮಕ್ಕಳ ಕಳ್ಳರು’ ಎಂದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ, ಮುಗ್ಧ ಬಡ ಜೀವವನ್ನು ಬಲಿ ತೆಗೆದುಕೊಂಡಿರುವುದು ವರದಿಯಾಗಿದೆ. ಇದು ಅತ್ಯಂತ ಅಮಾನವೀಯ.
ವಾಟ್ಸ್ಆ್ಯಪ್ ಎಂಬುದು ಸುಲಭ ಮತ್ತು ವೇಗದ ಸುದ್ದಿ ವಾಹಕವಾಗಿ ಕೆಲಸ ಮಾಡುವ ಉತ್ತಮ ತಂತ್ರಜ್ಞಾನ. ಇದನ್ನು ಕೆಲವರು ಸುಳ್ಳು ಸುದ್ದಿಯನ್ನು ಪಸರಿಸಲು ದುರ್ಬಳಕೆ ಮಾಡುತ್ತಿದ್ದಾರೆ. ಎಲ್ಲೋ ನಡೆದ ಘಟನೆಯ ವಿಡಿಯೊ ಇಟ್ಟುಕೊಂಡು, ‘ಇದು ನಮ್ಮ ಅಕ್ಕಪಕ್ಕದ ಜಿಲ್ಲೆಗಳಲ್ಲೇ ನಡೆದಿದೆ’ ಎಂದು ಬಿಂಬಿಸುತ್ತಿದ್ದಾರೆ. ಇನ್ನು ಕೆಲವರು ಹೀಗೆ ಬಂದಿರುವ ವಿಡಿಯೊದ ಸತ್ಯಾಸತ್ಯತೆಯನ್ನು
ಪರಿಶೀಲಿಸಲೂ ಹೋಗದೆ, ತಮ್ಮ ಸಂಪರ್ಕದಲ್ಲಿರುವವರಿಗೆಲ್ಲಾ ಅದನ್ನು ದಾಟಿಸುವುದರ ಪರಿಣಾಮ ಇಂತಹ ಅನಾಹುತಗಳಾಗುತ್ತಿವೆ.
ಬೇರೆಡೆಯಿಂದ ಕೆಲಸ ಅರಸಿ ಬಂದ ಯುವಕನನ್ನು ನಡುರಸ್ತೆಯಲ್ಲಿ ಹೊಡೆದು ಕೊಂದಿರುವುದು, ಇನ್ನೂ ಕೆಲವರನ್ನು ಕಂಬಕ್ಕೆ ಕಟ್ಟಿ ಥಳಿಸಿರುವುದೇ ಮುಂತಾದವು ಅಕ್ಷಮ್ಯ ಅಪರಾಧಗಳು. ಅನುಮಾನ ಬಂದವರನ್ನೆಲ್ಲಾ ಹಿಡಿದು ಹೊಡೆಯುವುದು ಅಪರಾಧ. ಶಂಕಿತ ವ್ಯಕ್ತಿಗ
ಳನ್ನು ಪೊಲೀಸರಿಗೊಪ್ಪಿಸದೆ, ಸಾರ್ವಜನಿಕರೇ ಗುಂಪುಗೂಡಿ ಹೊಡೆಯುವುದನ್ನು ‘ಸರಿಯಾದ ಶಾಸ್ತಿ’ ಎಂದು ವಿಜೃಂಭಿಸಿ ತೋರಿಸುವ ಚಾಳಿಯನ್ನು ದೃಶ್ಯ ಮಾಧ್ಯಮಗಳು ಇನ್ನಾದರೂ ಬಿಡಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲವೆಂಬ ಅರಿವು ಮೂಡಿಸಿದಾಗ ಇಂತಹ ಅನಾಹುತಗಳನ್ನು ತಪ್ಪಿಸಬಹುದು.
-ರತ್ನಶ್ರೀ ಶ್ರೀಧರ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.