ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಮಹತ್ತರ ಹೆಜ್ಜೆಗಳನ್ನಿಡುತ್ತಿದೆ. ಜಿಎಸ್ಟಿ ದೇಶದ ಆರ್ಥಿಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಮುಂದಿನ ದಶಕದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ, ಜಾಗತಿಕ ಆರ್ಥಿಕ ಬೆಳವಣಿಗೆಗೆ ಭದ್ರ ಬುನಾದಿ ಹಾಕಲಿದೆ ಎಂದು ಆರ್ಥಿಕ ಸಂಶೋಧನಾ ಸಂಸ್ಥೆಗಳು ಹೇಳುತ್ತಿವೆ.
ಎಲ್ಲ ಕ್ಷೇತ್ರಗಳಲ್ಲೂ ದೇಶ ದಾಪುಗಾಲು ಇಡುತ್ತಿದೆ. ಆದರೆ ಹಳ್ಳಿಗಳ ಸ್ಥಿತಿ ಮಾತ್ರ ಇನ್ನೂ ಸುಧಾರಿಸಿಲ್ಲ. ದೇಶದ ಅಭಿವೃದ್ಧಿ ಎಂದರೆ ಎಲ್ಲಾ ಜನರ ಅಭಿವೃದ್ಧಿ, ಹಳ್ಳಿಗಳ ಅಭಿವೃದ್ಧಿಯೂ ಆಗಬೇಕು. ಜನಸಾಮಾನ್ಯರಲ್ಲಿ ಆರ್ಥಿಕ ಚೇತರಿಕೆ ಲಕ್ಷಣಗಳು ಕಾಣದ ಹೊರತು ಅಭಿವೃದ್ಧಿ ಪೂರ್ಣವಾಗುವುದಿಲ್ಲ.
ಕೈಗಾರಿಕಾ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿಯಾದರೆ ಸಾಲದು. ಕೃಷಿ ಮತ್ತು ಗ್ರಾಮೀಣ ಮೂಲ ಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳ ಸಮತೋಲಿತ ಅಭಿವೃದ್ಧಿಯಾಗಬೇಕು. ಈ ದೃಷ್ಟಿಯಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ‘ವಿಷನ್ 20–20’ ಕನಸಿಗೆ ನೀರೆರೆದು ಪೋಷಿಸುವ ಅಗತ್ಯವಿದೆ.
ಕೇಂದ್ರ ಸರ್ಕಾರ ನಗರ ಪಟ್ಟಣಗಳ ಅಭಿವೃದ್ಧಿಯ ಜೊತೆಗೆ ಹಳ್ಳಿಗಳ ಬೆಳವಣಿಗೆಗೂ ಗಮನ ಹರಿಸಬೇಕು. ಜಾಗತಿಕ ಭೂಪಟದಲ್ಲಿ ದೇಶದ ಅಭಿವೃದ್ಧಿಗೆ ಅರ್ಥ ಬರುವುದು ಆಗಲೇ.
-ಸಿದ್ದಲಿಂಗ ಚೌಧರಿ, ಸಿಂದಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.