ಚಿತ್ರನಟ ದರ್ಶನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಕ್ಷೇತ್ರದ ಗಣ್ಯರಾದ ಅಂಬರೀಷ್ ಅವರು `ಕುಟುಂಬ ಎಂದ ಮೇಲೆ ಜಗಳ ಸಾಮಾನ್ಯ. ಗಂಡ-ಹೆಂಡತಿಗೆ ಹೊಡೆಯುವುದು, ಮಗ-ಅಮ್ಮನಿಗೆ ಹೊಡೆಯುವುದು ಇದೆಲ್ಲವೂ ಇರುತ್ತದೆ.
ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ~ ಎಂದು ಗಂಡು-ಹೆಣ್ಣನ್ನು ಹೊಡೆಯುವುದು ಪೌರುಷದ ಸಂಕೇತವೆಂಬಂತೆ ಫರ್ಮಾನು ಹೊರಡಿಸಿದ್ದಾರೆ!
ಹಾಗಿದ್ದರೆ ಹೆಂಡತಿ-ಗಂಡನಿಗೆ ಹೊಡೆಯುವುದು, ಮಗಳು-ಅಪ್ಪನಿಗೆ ಹೊಡೆಯುವುದನ್ನೂ ಅಂಬರೀಷ್ ಅವರು ಸರಿಯೆಂದು, ಶೌರ್ಯದ ಸಂಕೇತವೆಂದು ಒಪ್ಪಿಕೊಳ್ಳುತ್ತಾರೆಯೇ?
ದರ್ಶನ್ ಅವರ ಅಮಾನವೀಯ ಕ್ರೌರ್ಯವನ್ನು ಒಪ್ಪಿ, ಪ್ರತಿಪಾದಿಸುತ್ತಿರುವ ಅವರ ನಡವಳಿಕೆ ಹಾಗೂ ಹೇಳಿಕೆ ಸಂವಿಧಾನ ಹಾಗೂ ಕಾನೂನು ವಿರೋಧಿಯಾದುದು ಎಂಬ ಅರಿವು ಅವರಿಗಿದೆಯೇ? ಹೆಣ್ಣೆಂದರೆ ಹೊಡೆಸಿ-ಬಡಿಸಿಕೊಳ್ಳಲು ಇರುವವಳೆಂಬ ಅವರ ಅನಾಗರಿಕ ತಿಳಿವಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವೆಂದು ನಾವು ಭಾವಿಸುತ್ತೇವೆ.
- ರೂಪ ಹಾಸನ (ಹಾಸನ), ಸ. ಉಷಾ (ಶಿವಮೊಗ್ಗ), ಶಾರದಾ ಗೋಪಾಲ(ಧಾರವಾಡ), ಡಿ. ನಾಗಲಕ್ಷ್ಮಿ (ಬಳ್ಳಾರಿ), ಪಿ. ಹೇಮಲತ (ಮೈಸೂರು), ಜಿ. ಅನ್ನಪೂರ್ಣ (ಬೆಂಗಳೂರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.