ಈಗಾಗಲೇ ರಾಜ್ಯದಾದ್ಯಂತ ವ್ಯಾಪಿಸಿ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳನ್ನು ಬಲಿ ಪಡೆದಿರುವ ಚರ್ಮಗಂಟು ರೋಗಕ್ಕೆ ಸಂಬಂಧಿಸಿದಂತೆ ಸರ್ಕಾರವು ಸಕಾಲಿಕವಾಗಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳದೇ ಇರುವುದನ್ನು ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ವರದಿ (ಪ್ರ.ವಾ., ನ. 22) ಎತ್ತಿತೋರಿಸುವಂತಿದೆ. ರೋಗವನ್ನು ನಿಯಂತ್ರಿಸಲು ಲಸಿಕೆಯಿದ್ದಾಗ್ಯೂ ಅದನ್ನು ಖರೀದಿಸಿ ದಾಸ್ತಾನು ಇರಿಸಿಕೊಂಡಿದ್ದಾಗ್ಯೂ ಲಸಿಕೆ ಹಾಕಲು ಅಗತ್ಯ ಸಿಬ್ಬಂದಿಯ ಕೊರತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದರೆ ಇದಕ್ಕೆ ಏನು ಹೇಳಬೇಕೋ!
ಗೋಸಂರಕ್ಷಣೆಯ ಕುರಿತು ನಮ್ಮ ನಾಯಕರು ಅತಿಯಾದ ಕಾಳಜಿ ವ್ಯಕ್ತಪಡಿಸುತ್ತಾರೆ. ಆದರೂ ಯಾಕಿಷ್ಟು ನಿರ್ಲಕ್ಷ್ಯ? ಗೋವು ರಾಜಕೀಯ ಅಸ್ತ್ರ ಮಾತ್ರವೇ? ಸರ್ಕಾರ ಈ ಕೂಡಲೇ ಅಗತ್ಯ ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲು ವೈದ್ಯಾಧಿಕಾರಿಗಳಿಗೆ ಅನುಮತಿ ನೀಡಬೇಕು ಮತ್ತು ರೋಗ ನಿಯಂತ್ರಣ ಸಾಧಿಸಬೇಕು. ಈ ಹೊತ್ತಿಗೂ ನಮ್ಮ ಕೃಷಿಕ್ಷೇತ್ರದ ಅಪಾರ ಶ್ರಮವನ್ನು ನಿಭಾಯಿಸುತ್ತಿರುವ ಜಾನುವಾರುಗಳು ರೈತಾಪಿ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಂಬಂಧಿಸಿದವರೆಲ್ಲರೂ ಇಚ್ಛಾಶಕ್ತಿ ತೋರಿದರೆ ಖಂಡಿತ ರೋಗ ನಿಯಂತ್ರಣವಷ್ಟೇ ಅಲ್ಲ, ನಿರ್ಮೂಲನೆಯೂ ಸಾಧ್ಯ.
ಅಯ್ಯಪ್ಪ ಹೂಗಾರ್,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.