ಕ್ರಿಕೆಟ್ ಪ್ರೇಮಿಗಳಿಗೆ ಪೊಲೀಸ್ ಲಾಠಿ
ಬೆಂಗಳೂರು, ಮಾರ್ಚ್ 3– ಕಂಬಳಿ ಹೊದಿಕೆ ಹೊದ್ದು ರಾತ್ರಿಯಿಂದಲೇ ರಸ್ತೆಯ ಮಗ್ಗುಲಿನಲ್ಲಿ ಬೀಡು ಬಿಟ್ಟಿದ್ದ ಸಹಸ್ರಾರು ಕ್ರಿಕೆಟ್ ಪ್ರೇಮಿಗಳು ಟಿಕೆಟ್ ಸಿಗದೆ ನಿರಾಶರಾದರು. ತಮಗಾದ ಅನ್ಯಾಯವನ್ನು ಪ್ರತಿಭಟಿಸಿ ನೂರಾರು ಜನ ಕಬ್ಬಿಣದ ಗೇಟುಗಳನ್ನು ಮುರಿದು ಕ್ರೀಡಾಂಗಣದ ಒಳಗೆ ನುಗ್ಗಿದರು.ಉದ್ರಿಕ್ತ ಕ್ರಿಕೆಟ್ ಪ್ರೇಮಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಇಂದು ರಣರಂಗವಾಗಿತ್ತು. ಮುಂದಿನ ಶನಿವಾರ ಇಲ್ಲಿ ನಡೆಯಲಿರುವ ವಿಲ್ಸ್ ವಿಶ್ವಕಪ್ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಭಾರತ–ಪಾಕಿಸ್ತಾನ ತಂಡಗಳು ಆಡುವುದು ಬಹುತೇಕ ಖಚಿತವಾಗಿದೆ. ಅದರಿಂದಾಗಿ ಟಿಕೆಟ್ಗಳಿಗೆ ಬೇಡಿಕೆ ಹೆಚ್ಚಿತ್ತು.
ಜನತಾದಳ ಲಿಂಗಾಯತಶಾಸಕರ ಅಸಮಾಧಾನ
ಬೆಂಗಳೂರು, ಮಾರ್ಚ್ 3– ಸರ್ಕಾರದಲ್ಲಿ ತಮಗೆ ಸೂಕ್ತ ಸ್ಥಾನಮಾನ ದೊರಕುತ್ತಿಲ್ಲ, ಉದ್ದೇಶಪೂರ್ವಕವಾಗಿ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ದೂರುಗಳು ಈಚೆಗೆ ನಗರದಲ್ಲಿ ನಡೆದ ಜನತಾದಳದ ಲಿಂಗಾಯತ ಶಾಸಕರ ಸಭೆಯಲ್ಲಿ ಕೇಳಿ ಬಂದವು.
ಈ ಸರ್ಕಾರ ತಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುತ್ತಿಲ್ಲ. ಪ್ರತಿಯೊಂದು ಹಂತದಲ್ಲಿಯೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವಂಥ ಘಟನೆಗಳು ಆಡಳಿತದಲ್ಲಿ ನಡೆಯುತ್ತಿವೆ ಎಂದೂ ಆಡಳಿತ ಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.