ADVERTISEMENT

ಉತ್ತರ ಅನಗತ್ಯ!

ಆರ್.ಕೆ.ದಿವಾಕರ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

‘ನಮ್ಮದು ಮನುಷ್ಯತ್ವವುಳ್ಳ ಹಿಂದುತ್ವ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾಗಿ ವರದಿಯಾಗಿದೆ (ಪ್ರ.ವಾ., ಜ. 9).

‘ಹಿಂದೂ ಆಗಿದ್ದರೆ ಗೋಹತ್ಯೆ ನಿಷೇಧಿಸಲಿ’ ಎನ್ನುವ ಯೋಗಿ ಆದಿತ್ಯನಾಥರ ಸವಾಲಿಗೆ, ಸಿದ್ದರಾಮಯ್ಯ ಉತ್ತರ ನೀಡುವ ಆವಶ್ಯಕತೆಯಿರಲಿಲ್ಲ. ‘ಹಿಂದುಸ್ತಾನ’ ಎಂಬುದು ಸ್ಥಳವಾಚಕವೇ ಹೊರತು ಸಂಪ್ರದಾಯವಲ್ಲ. ಇದನ್ನು, ಪ್ರಬುದ್ಧ ಅಹಿಂದ ಮುಖಂಡರು ಹಿಂದೂ ಯೋಗಿಗೆ ಮನದಟ್ಟು ಮಾಡಿಕೊಡಬೇಕಾಗಿತ್ತು. ‘ಹಿಂದೂ’ ಎಂಬ ಶಬ್ದದಲ್ಲೇ ‘ಮರ್ಯಾದೆ’ ಇಲ್ಲ! ಆಕ್ರಮಣಕಾರಿ ಯವನರು, ತಮ್ಮಿಂದ ಸೋಲನುಭವಿಸಿದ ಜನರನ್ನು ಗೌರವಪೂರ್ವಕವಾಗಿ ಹೀಗೆ ಕರೆದಿರಲಾರರು. ಅವರನ್ನು ಅನುಸರಿಸಿ ಬಂದ ಮುಸ್ಲಿಂ ದಾಳಿಕೋರರಿಗೂ ಇಲ್ಲಿನ ವೈದಿಕ, ಜೈನ, ಸಿಖ್ ಸಮುದಾಯಗಳೆಲ್ಲಾ ಒಂದೇ. ಸೋತ ಈ ಸಮುದಾಯಗಳಿಗೆ ಆಕ್ರಮಣಕಾರರಿಟ್ಟ ‘ಹಿಂದೂ’ ಹೆಸರನ್ನು ಆದರದಿಂದ ಸ್ವೀಕರಿಸಿ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹುಂಬತನವೇ ಸರಿ! ಸಾಂಪ್ರದಾಯಿಕ ಮೌಲ್ಯಗಳಿರುವುದು ‘ಭಾರತೀಯತೆ’ಯಲ್ಲೇ ಹೊರತು ‘ಹಿಂದುತ್ವ’ದಲ್ಲಲ್ಲ.

ಆದಿಯಲ್ಲಿದ್ದ ವೈದಿಕ ಮಾರ್ಗದಲ್ಲಿನ ನ್ಯೂನತೆಗಳನ್ನು ಕಾಲಕಾಲಕ್ಕೆ ಸುಧಾರಿಸುತ್ತಾ ಮೂಡಿಬಂದ ಬೌದ್ಧ, ಜೈನ, ಸಿಖ್, ಶರಣ, ಭಕ್ತ ಇತ್ಯಾದಿ ಚಿಂತನೆಗಳೂ ಸಮಾನವಾಗಿ ‘ಭಾರತೀಯ’ವೇ. ಮತಾಂಧರೆದುರು, ಮತಿವಂತರು ತಾವೂ ‘ಹಿಂದೂಗಳು’ಎಂದು ಪ್ರತಿಪಾದಿಸಿಕೊಳ್ಳಬೇಕಾದ ಆವಶ್ಯಕತೆಯಾದರೂ ಏನು?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.