ADVERTISEMENT

ಏಕತೆ ಅಗತ್ಯ

ರುದ್ರೇಶ್ ಬಿ.ಅದರಂಗಿ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

ವಿವಿಧ ಸಂಘಟನೆಗಳು ಮತ್ತು ಸಮುದಾಯಗಳು ಇಂದು ತಮ್ಮದೇ ವಿಚಾರಗಳನ್ನು ಮುಂದುಮಾಡಿಕೊಂಡು ಪ್ರತ್ಯೇಕತೆಯನ್ನು ಅಸ್ಮಿತೆಯನ್ನಾಗಿಸಿಕೊಳ್ಳುತ್ತಿವೆ. ವಿಪರ್ಯಾಸದ ಸಂಗತಿಯೆಂದರೆ, ‘ಭಾರತದ ಬಹುತ್ವ’ ಉಳಿಸಬೇಕೆಂದು ವಾದಿಸುವ ಇವರು, ತಮ್ಮ ನಿರ್ದಿಷ್ಟವಾದ ಗುಂಪೇ ಭಾರತ ಎಂದು ಭಾವಿಸಿದಂತಿದೆ.

ಭಾರತವೆಂದರೆ ಒಂದು ನಿರ್ದಿಷ್ಟವಾದ ಜಾತಿ, ಜನಾಂಗ, ಭಾಷಿಕರ ರಾಷ್ಟ್ರವಲ್ಲ. ಅದು ಎಲ್ಲರನ್ನೂ ಒಳಗೊಂಡುದಾಗಿದೆ. ಭೀಮಾ ಕೋರೆಗಾಂವ್ ದ್ವಿಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನಡೆದಿರುವ ಹೋರಾಟ, ಚರ್ಚೆಗಳಲ್ಲಿ ಸಮಾಜವನ್ನು ಎರಡು ಗುಂಪುಗಳಾಗಿ ಪ್ರತ್ಯೇಕಿಸುವ ಹುನ್ನಾರುಗಳು ಗೋಚರವಾಗುತ್ತಿವೆ. ಇದು ಮುಂದಿನ ಸಂಘರ್ಷಕ್ಕೆ ಕಾರಣವಾಗುವ ಅಪಾಯವನ್ನು ಅರಿಯಬೇಕಾಗಿದೆ. ನಮ್ಮ ತಿಳಿವಳಿಕೆ, ಪ್ರತಿಭಟನೆಗಳು ಸೈದ್ಧಾಂತಿಕವಾಗಿರುವುದು ಮತ್ತು ಎಲ್ಲರನ್ನೂ ಒಳಗೊಳ್ಳುವಂತಿರುವುದು ಅಗತ್ಯ. ಆದರೆ ಇಂದು ಜಾತಿಯನ್ನು ಮುಂದುಮಾಡಿಕೊಂಡು ನಡೆಯುವ ವಿಭಜಿಸುವ ಪ್ರಯತ್ನಗಳು ‘ಒಳಗೊಳ್ಳುವಿಕೆ’ಯ ದಾರಿಯನ್ನು ಇಲ್ಲವಾಗಿಸುತ್ತಿವೆ.

ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ವಿಚಾರವಂತರು ನಾಲ್ಕು ಹೆಜ್ಜೆ ಮುಂದೆಯೇ ಯೋಚಿಸುವುದು ಅಗತ್ಯ. ರಾಜಕಾರಣಿಗಳು ಜಾತ್ಯತೀತತೆ, ಸಂವಿಧಾನ ತಿದ್ದುಪಡಿಯಂಥ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶವು, ಅದರ ಲಾಭವನ್ನು ಪಡೆಯುವುದೇ ಆಗಿದೆ. ಇಂತಹ ಸಂದರ್ಭದಲ್ಲಿ ‘ಮಾನವ ಜಾತಿ ತಾನೊಂದೆ ವಲಂ’ ಎಂಬ ಆದಿಕವಿ ಪಂಪನ ಮಾತನ್ನು ಅಜ್ಞಾನಿಗಳು ಮತ್ತು ಅವಿವೇಕಿಗಳಿಗೆ ತಿಳಿಯಪಡಿಸಬೇಕಿದೆ. ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಎಲ್ಲರನ್ನೂ ಒಳಗೊಂಡ ‘ಸರ್ವಜನಾಂಗದ ಶಾಂತಿಯ ತೋಟ’ವನ್ನು ನಿರ್ಮಾಣ ಮಾಡಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.