‘ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜನೆ ಮಾಡಿರುವ ಧಾಟಿಗೇ ಅಧಿಕೃತ ಮಾನ್ಯತೆ ನೀಡಬೇಕು’ ಎಂದು ಹಿರಿಯ ಸಾಹಿತಿ ಕೆ.ಎಸ್. ನಿಸಾರ್ ಅಹಮದ್ ಮತ್ತು ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂಬುದು ಸಂತೋಷದ ವಿಚಾರ.
ಈ ಗೀತೆ ಮುಂದೆ ನಾಡಗೀತೆ ಆಗುವುದೆಂಬ ಕಲ್ಪನೆಯೂ ಇಲ್ಲದಿದ್ದ ಕಾಲದಲ್ಲೇ ಅನಂತಸ್ವಾಮಿಯವರು ಅದಕ್ಕೆ ಸುಮಧುರವಾದ ರಾಗ ಸಂಯೋಜನೆ ಮಾಡಿದ್ದಾರೆ. ಅದಕ್ಕೇ ಮಾನ್ಯತೆ ನೀಡಿ, ಸುಗಮ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಅವರಿಗೆ ಗೌರವ ಸಲ್ಲಿಸಬೇಕಾದ್ದು ಸರ್ಕಾರದ ಕರ್ತವ್ಯ. ವಸಂತ ಕನಕಾಪುರ ಅಧ್ಯಕ್ಷತೆಯ ಸಮಿತಿಯೂ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಗೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಿತ್ತು.
‘ಅಶ್ವತ್ಥ್ ಅವರು ಹಾಕಿರುವ ರಾಗವೇ ಇರಲಿ’ ಎಂದು ಕೆಲವು ಗಾಯಕರು ಒತ್ತಾಯಿಸುತ್ತಿದ್ದಾರೆ. ಈ ರಾಗ ಯುದ್ಧಕ್ಕೆ ಹೊರಟಿರುವ ಸೈನಿಕರ ಮೆರವಣಿಗೆಯ ಶೈಲಿಯಲ್ಲಿದ್ದು, ನಾಡಗೀತೆಗೆ ಒಗ್ಗುತ್ತಿಲ್ಲ. ಹಾಡಲು ತುಂಬಾ ಸಮಯವನ್ನೂ ತೆಗೆದುಕೊಳ್ಳುತ್ತದೆ. ಅನಂತಸ್ವಾಮಿಯವರ ರಾಗ ಸಂಯೋಜನೆ ಗೀತೆಗೆ ಒಪ್ಪುವಂತಿದ್ದು, ಅದಕ್ಕೇ ಮಾನ್ಯತೆ ನೀಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.