ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು ಮತದಾರರಿಗೆ ಹಣ, ಚಿನ್ನ, ಬೆಳ್ಳಿ, ಮದ್ಯ, ಊಟ... ಇತ್ಯಾದಿಗಳ ಆಮಿಷವನ್ನು ಒಡ್ಡಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಜ. 20). ಇದು ತೀರಾ ಆಘಾತಕಾರಿ ಸಂಗತಿ. ‘ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ’ ಎಂದೂ ವರದಿ ಹೇಳಿದೆ. ಇದು ಸಹ ಅಷ್ಟೇ ಆತಂಕ ಸೃಷ್ಟಿಸುವ ವಿಷಯ.
ವಕೀಲರ ಸಂಘದ ಚುನಾವಣೆ ಈ ಮಟ್ಟಕ್ಕೆ ತಲುಪಿರುವಾಗ, ಸ್ಪರ್ಧೆಯಲ್ಲಿ ಗೆದ್ದವರಿಗೆ ದೊಡ್ಡ ಪ್ರಮಾಣದ ಲಾಭ ಇರಬಹುದು ಎಂದು ಜನರು ಭಾವಿಸಿದರೆ ತಪ್ಪೇನಿದೆ? ಹೆಚ್ಚಿನ ವಕೀಲ ಮತದಾರರು ಆಮಿಷಕ್ಕೆ ಒಳಗಾಗದೆ ಇರಬಹುದು.
ಪ್ರಸ್ತುತ ದೇಶದ ರಾಜಕೀಯ ಸ್ಥಿತಿಯಲ್ಲಿ, ‘ಗೆಲುವು ಮುಖ್ಯ, ಅದಕ್ಕಾಗಿ ತುಳಿಯುವ ಮಾರ್ಗ ಮುಖ್ಯವಲ್ಲ’ ಎಂಬ ಧೋರಣೆ ದಟ್ಟವಾಗಿದೆ. ಇಂಥ ಸ್ಥಿತಿಯಲ್ಲಿ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕಾದ ವಕೀಲರು ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕಲ್ಲವೇ?
ಇತ್ತೀಚೆಗೆ ಸುಪ್ರೀಂ ಕೋರ್ಟ್ನ ಕೆಲವು ನ್ಯಾಯಮೂರ್ತಿಗಳ ನಡೆ ಜನರಲ್ಲಿ ಬೇಸರ ಮೂಡಿಸಿದೆ. ನಮ್ಮ ನಾಡಿನ ಬಾಗಿಲಲ್ಲೇ ಒಂದು ಪ್ರಜ್ಞಾವಂತ ವೃತ್ತಿ ಸಮುದಾಯಕ್ಕೆ ಕಳಂಕ ತರುವ ಕೆಲವರ ನಡವಳಿಕೆಯೂ ಅಂಥದ್ದೇ ಹತಾಶ ಭಾವನೆ ಮೂಡಿಸುವಂತಿದೆ.
-ಪ್ರೊ. ಬಿ.ಕೆ. ಚಂದ್ರಶೇಖರ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.