ADVERTISEMENT

ಬುದ್ಧ ಮತ್ತು ಭಜನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST

‘ಎಳ್ಳು ಬೆಲ್ಲ ತಿಂದು ಒಳ್ಳೇ ಮಾತಾಡಿ’ ಎಂಬುದು ಲೋಕರೂಢಿಯ ಮಾತು. ಇದಕ್ಕೆ ಅಪವಾದ ಎಂಬಂತಾಗಿದೆ ಶ್ರೀನಿವಾಸ ಪ್ರಸಾದ್ ಮಾತು. ಅವರು ಹಿರಿಯ ರಾಜಕಾರಣಿ. ಅವರ ಬಗ್ಗೆ ಬಹಳ ಜನರಿಗೆ ಮೆಚ್ಚುಗೆ ಇದೆ. ಸಾರ್ವಜನಿಕ ಜೀವನದಲ್ಲಿ ಹೆಚ್ಚು ಕಾಲ ಗುರುತಿಸಿಕೊಂಡವರು, ಅಧಿಕಾರ ಅನುಭವಿಸಿದವರು, ಸಜ್ಜನಿಕೆಗೆ ಹೆಸರಾದವರು.

ಆದರೆ ಇತ್ತೀಚೆಗೆ ಅವರ ಮಾತುಗಳನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಹಿರಿಯ ನಾಯಕನಾಗಿ ಅವರು, ದಲಿತ ನಾಯಕರ ಬಗ್ಗೆ ಕೀಳಾಗಿ, ಅಪಹಾಸ್ಯವಾಗಿ ಮಾತನಾಡುತ್ತಿರುವುದು ದುರಂತ.

ಬಹುಮುಖ್ಯವಾಗಿ ಎರಡು ರಾಜಕೀಯ ಪ್ರಸಂಗಗಳನ್ನು ಸ್ಮರಿಸಬೇಕಾಗಿದೆ.

ADVERTISEMENT

ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಸಂವಿಧಾನದ ಪರಾಮರ್ಶೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡು ಸಂವಿಧಾನ ಪರಾಮರ್ಶೆ ಅನಿವಾರ್ಯ ಎಂದು ಪ್ರತಿಪಾದಿಸಿದ್ದರು.

ದಲಿತ ಸಮುದಾಯದ ನಾಡಿಮಿಡಿತ ಬಲ್ಲ ಪ್ರಸಾದ್, ದಲಿತ ಸಮುದಾಯ ತಮ್ಮಿಂದ ದೂರವಾಗಿದೆ ಎಂಬುದನ್ನು ನಂತರ ಮನಗಂಡು ಸಕ್ರಿಯ ರಾಜಕಾರಣದಿಂದ ಬಿಡುವು ಪಡೆದು ವಿಶ್ರಾಂತಿಯ ನೆಪದಲ್ಲಿ ಮನೆ ಸೇರಿಕೊಂಡರು. ಬಳಿಕ ದಲಿತ ಸಮುದಾಯವನ್ನು ಓಲೈಸುವ ಉದ್ದೇಶದಿಂದ ‘ಬುದ್ಧನೆಡೆಗೆ ಮರಳಿ ಮನೆಗೆ’ ಕಾರ್ಯಕ್ರಮ ಆಯೋಜಿಸಿ ಮರಳಿ ಕಾಂಗ್ರೆಸ್ ಪಕ್ಷ ಸೇರಿದ್ದೇ ಅವರ ಬಹುದೊಡ್ಡ ಸಾಧನೆ.

ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಲೋಕಶಕ್ತಿ ಪಕ್ಷದಿಂದ ಸ್ಪರ್ಧಿಸಿದಾಗ ಧರ್ಮಸಿಂಗ್, ಖರ್ಗೆ ಅವರನ್ನು ಕತ್ತೆಗೆ ಹೋಲಿಸಿ ತೀರಾ ಅವಹೇಳನಕಾರಿಯಾಗಿ ಮಾತನಾಡಿದರು. ಸಚಿವ ಮಹದೇವಪ್ಪ ಅವರನ್ನೂ ಕತ್ತೆಗೆ ಹೋಲಿಸಿದ ಪ್ರಸಾದ್ ಅವರಿಗೆ ಕತ್ತೆಯ ಇತಿಹಾಸ ತಿಳಿಯದಿರುವುದು ಆಶ್ಚರ್ಯ. ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಚಿಹ್ನೆ ಕತ್ತೆ. ಆ ಪಕ್ಷ ಅಮೆರಿಕವನ್ನು ಬಹಳ ಕಾಲ ಆಳಿದೆ. ಹಿಂದೂ ದೇವತೆ ಶೀತಲಾದೇವಿಯ ವಾಹನವೂ ಕತ್ತೆ.

ಶ್ರೀನಿವಾಸಪ್ರಸಾದ್ ತಮ್ಮ ಹಟಮಾರಿ ಧೋರಣೆ, ಕೀಳುಮಟ್ಟದ ಹೇಳಿಕೆಗಳಿಂದ ಸಮುದಾಯದ ಸಹಾನುಭೂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅವರು ಬುದ್ಧನನ್ನು ಬದಿಗೊತ್ತಿ, ಮೋದಿ ಭಜನೆ ಮಾಡುತ್ತಿರುವುದು ವಿಪರ್ಯಾಸ.

ನಂಜುಂಡಸ್ವಾಮಿ, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.