ನಿನ್ನೆಯ (ಜ.30ರ) ‘ಪ್ರಜಾವಾಣಿ’ ಓದಿದ ನಂತರ ಈ ಕೆಲವು ಸಾಲುಗಳನ್ನು ಬರೆಯಬೇಕೆನ್ನಿಸಿತು:
ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಸ್ಮರಣೆಯ ಸಮಾರಂಭದ ಅತಿಥಿ- ಗಣ್ಯರ ಸಮೂಹದಲ್ಲಿ ಎಚ್.ಎಸ್. ದೊರೆಸ್ವಾಮಿ ಮತ್ತು ಪ್ರಕಾಶ್ ರೈ ಎಂಬ ಇಬ್ಬರಾದರೂ ಸ್ಥಳೀಯರಿದ್ದುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಮಾರಂಭವು, ಗೌರಿಯವರ ಕೊಲೆಯ ತನಿಖೆ ಎಲ್ಲಿಗೆ ಬಂದಿದೆ ಎಂಬ ಪ್ರಶ್ನೆಯನ್ನು ಔಪಚಾರಿಕತೆಗಾದರೂ ಕೇಳದೆ, ಬರೀ ಬಿಜೆಪಿ ವಿರೋಧಿ ಕೂಗಾಟದಲ್ಲಿ ಮುಗಿದಿರುವುದು ಪರೋಕ್ಷವಾಗಿ, ರಾಜಕೀಯವಾಗಿ ತಟಸ್ಥರಾಗಿದ್ದ ಜನರಲ್ಲಿ ಬಿಜೆಪಿ ಕುರಿತ ಸಹಾನುಭೂತಿಯನ್ನು ಹೆಚ್ಚಿಸಿದೆ. ಹೀಗಾಗಿ ಈ ಸಮಾರಂಭ ಬಿಜೆಪಿ ಬೆಂಬಲಿಗರನ್ನು ಖುಷಿಪಡಿಸುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.
ಗಾಂಧಿಯನ್ನು ದಿನವೂ ಕೊಲ್ಲುತ್ತಿರುವ ಬಗ್ಗೆ ಬರೆದಿರುವ ಎ. ನಾರಾಯಣ ಅವರ, ‘ದಿನಾ ಕೊಲೆಗೀಡಾದರೂ ಸಾಯದ ಗಾಂಧಿ’ ಲೇಖನವು ಗಾಂಧಿಯನ್ನು ಜೀವಂತವಾಗಿರಿಸಬೇಕಾದ ನೈತಿಕ ಜವಾಬ್ದಾರಿಯನ್ನು ಸ್ವಾತಂತ್ರ್ಯ ಪಡೆದ ದಿನದಿಂದಲೇ ಕೈಬಿಟ್ಟು, ಅವರನ್ನು ಬಹು ಹಿಂದಿನಿಂದಲೂ ಕೊಲ್ಲುತ್ತಾ ಬಂದಿರುವ ಕಾಂಗ್ರೆಸ್ ಬಗ್ಗೆ ಬರೆಯದಿರುವುದು ಆಶ್ಚರ್ಯ ತಂದಿತು. ಹಾಗೆ ನೋಡಿದರೆ, ಗಾಂಧಿರಹಿತ ಭಾರತ ನಿರ್ಮಾಣಕ್ಕಾಗಿ ಕಂಕಣಬದ್ಧವಾಗಿರುವ
ಹಿಂದೂ ಕೋಮುವಾದಿ ರಾಜಕಾರಣದ ನಿಜ ಮೂಲ ಪುರುಷರು ಈ ಕಾಂಗ್ರೆಸ್ಸಿಗರೇ ಅಲ್ಲವೇ? ಜನ ಯೋಚಿಸಬಲ್ಲರು.
ಒಟ್ಟಿನಲ್ಲಿ ಇತ್ತೀಚೆಗೆ ‘ಸೆಕ್ಯುಲರಿಸ್ಟ’ರು ಏನೇ ಮಾಡಿದರೂ, ಅದರಲ್ಲಿ ಸಮತೋಲನವಿಲ್ಲದೆ, ಅದು (ಹಿಂದೂ ಅಥವಾ) ಕೋಮುವಾದಿಗಳಿಗೇ ನೆರವಾಗುವಂತಿದೆ! ಸೆಕ್ಯುಲರಿಸ್ಟರು ತಾವೆಲ್ಲವನ್ನೂ ಬಹಳ ಹಿಂದೆಯೇ ಯೋಚಿಸಿಯಾಗಿದೆ ಎಂಬ ಅಜ್ಞಾನವನ್ನು ತೊರೆದು ಈಗ ಜನರಂತೆ, ಜನರ ಜೊತೆ ತಾವೂ ಯೋಚಿಸುವ ಕಾಲ ಬಂದಿದೆ ಎಂಬುದನ್ನು ತಿಳಿದರೆ ಒಳ್ಳೆಯದು.
ಡಿ.ಎಸ್. ನಾಗಭೂಷಣ, ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.