ADVERTISEMENT

ತ್ಯಾಜ್ಯ ನಿರ್ವಹಣೆ: ಎಡವಿದ್ದೆಲ್ಲಿ?

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 17:49 IST
Last Updated 4 ಜೂನ್ 2019, 17:49 IST

ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ‘ವಾಯುಮಾಲಿನ್ಯ ನಿಲ್ಲಿಸಿ’ ಎಂಬುದು. ಯಾವ ಮಾಲಿನ್ಯವೇ ಇರಲಿ ಪೆಟ್ಟು ಬೀಳುವುದು ಪರಿಸರಕ್ಕೆ. ವಿಶ್ವ ಹವಾಮಾನ ವೈಪರೀತ್ಯದ ಬಗೆಗೆ ಕಳವಳ ತೀವ್ರವಾಗಿರುವ ಸಮಯದಲ್ಲಿ, ನಮ್ಮ ಚಟುವಟಿಕೆಗಳ ಮೂಲಕ ಉತ್ಪಾದನೆಯಾಗುವ ತ್ಯಾಜ್ಯವು ಪರಿಸರದ ನಾಶಕ್ಕೆ ಹೇತುವಾಗುತ್ತಿದೆ. ಭಾರತದಲ್ಲಿ ಪ್ರತಿ ದಿನ ಉತ್ಪಾದನೆಯಾಗುವ ಸಾವಿರಾರು ಟನ್ನುಗಳಷ್ಟು ಕಸದ ಸೂಕ್ತ ನಿರ್ವಹಣೆ ಇಲ್ಲದಿರುವುದಕ್ಕೆ ಜನರ ನಿರಾಸಕ್ತಿ ಮತ್ತು ತಿಳಿವಳಿಕೆಯ ಕೊರತೆ ಕಾರಣ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಕಸದ ನಿರ್ವಹಣೆಯಲ್ಲಿ ಸರ್ಕಾರ ಎಡವಿದ್ದು ಕಸದ ತೊಟ್ಟಿಯ ಮೂಲಕ. ನಮ್ಮಲ್ಲಿ ಕಸ ಸಂಸ್ಕರಣೆಯ ವಿಧಾನಗಳು ಇನ್ನೂ ಬಾಲಿಶ ಹಂತದಲ್ಲಿವೆ. ತ್ಯಾಜ್ಯ ಸಂಗ್ರಹಣೆಯ ವಿಧಾನಗಳೂ ಅವೈಜ್ಞಾನಿಕವಾಗಿದ್ದು, ತುಂಬಿ ತುಳುಕುವ ಕಸ ವಿಲೇವಾರಿ ವಾಹನಗಳು ನಮ್ಮ ಕಣ್ಣಮುಂದಿವೆ. ಕಸ ವಿಲೇವಾರಿಯಲ್ಲಿ ಬಹು ದೊಡ್ಡ ಪಾತ್ರ ಇರುವುದು ಕಸದ ತೊಟ್ಟಿಗಳದ್ದು.

ಹ್ಯೂಸ್ಟನ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ವರದಿಯು, ತ್ಯಾಜ್ಯ ಸಂಗ್ರಹ ಕ್ರಿಯೆಯಲ್ಲಿ ಕಸದತೊಟ್ಟಿಗಳ ಸಂಖ್ಯೆ ಮತ್ತು ಅವು ಇರುವ ಪ್ರದೇಶ ಕೂಡಾ ಗಮನಾರ್ಹ ಪಾತ್ರ ವಹಿಸುತ್ತದೆ ಎನ್ನುತ್ತದೆ. ಭಾರತದಲ್ಲಂತೂ ಕಸದ ತೊಟ್ಟಿಗಳನ್ನು ನಾವು ಸರಿಯಾಗಿ ನಿರ್ವಹಿಸುವುದಿಲ್ಲ. ಬೇರೆ ದೇಶಗಳಲ್ಲಿ ಅಂಗಡಿ ಮುಂಗಟ್ಟು ಮಾತ್ರವಲ್ಲದೆ ಇತರೆಡೆಯಲ್ಲಿಯೂ ಕೆಲವೇ ಕೆಲವು ಮೀಟರ್‌ಗಳಿಗೆ ಒಂದರಂತೆ ಕಸದ ತೊಟ್ಟಿಗಳಿರುತ್ತವೆ. ಒಂದು ತಿನಿಸು ಪಡೆದುಕೊಂಡ ವ್ಯಕ್ತಿಯು ನಡೆದುಕೊಂಡು ತಿನ್ನುತ್ತಾ ಹೋದರೆ, ಅದರ ಕವರ್ ಬಿಸಾಡುವಷ್ಟರಲ್ಲೇ ಆತನ ಮುಂದೆ ಇನ್ನೊಂದು ಕಸದ ತೊಟ್ಟಿ ಪ್ರತ್ಯಕ್ಷವಾಗಿರುತ್ತದೆ. ಹೀಗಾದಾಗ ಅಭ್ಯಾಸ ಬಲದಂತೆ ಕಸ ಎಲ್ಲಿ ಸೇರಬೇಕೋ ಅಲ್ಲಿ ಸೇರಿರುತ್ತದೆ. ಆದರೆನಮ್ಮ ಎಷ್ಟೋ ಪ್ರದೇಶಗಳಲ್ಲಿ ಕಿಲೊ ಮೀಟರ್‌ಗೆ ಒಂದರಂತೆ ಕೂಡಾ ಕಸದ ತೊಟ್ಟಿಗಳಿಲ್ಲ. ಕೆಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಂದೂ ಅಧಿಕೃತ ಕಸದ ತೊಟ್ಟಿ ಇರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ, ನಾವು ಜನರನ್ನಷ್ಟೇ ದೂರುವುದು ಸರಿಯಲ್ಲ.

ಸಂದೀಪ್ ಕೆ.,ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.