ADVERTISEMENT

ವಾಚಕರ ವಾಣಿ: ಅಪಘಾತದ ಕಾರಣ ನಿರ್ಣಯಕ್ಕೆ ಮುನ್ನ...

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 19:45 IST
Last Updated 22 ಅಕ್ಟೋಬರ್ 2020, 19:45 IST

‘ಅವಸರವೇ ಅಪಘಾತಕ್ಕೆ ಕಾರಣ’ ವರದಿಯು (ಪ್ರ.ವಾ., ಅ. 22) ಸೋಜಿಗ ಉಂಟುಮಾಡುವಂತಿದೆ. ದ್ವಿಚಕ್ರ ವಾಹನ ಸವಾರರು ಹೆಚ್ಚು ಸಾವಿಗೀಡಾಗುತ್ತಿರುವ ಅಂಶ ಗಮನಿಸಬೇಕಾದುದು. ಬಯಲುಸೀಮೆ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುವ ರೀತಿ ನೋಡಿದರೆ ಭಯವಾಗುತ್ತದೆ. ಈ ವಾಹನಗಳಲ್ಲಿ ಮೂರ್ನಾಲ್ಕು ಜನ ಸಂಚರಿಸುವುದು, ಸವಾರರು ಬೈಕ್ ಚಲಾಯಿಸುತ್ತಲೇ ಮೊಬೈಲ್‌ ಅನ್ನು ಎಡಗೈಲಿ ಹಿಡಿದು ಅಥವಾ ಕಿವಿಗೆ ಒತ್ತಿ ಹಿಡಿದು ಮಾತನಾಡುವುದು ಸರ್ವೇಸಾಮಾನ್ಯ ದೃಶ್ಯಗಳಾಗಿವೆ. ಈ ರೀತಿ ವಾಹನ ಚಲಾಯಿಸಿದರೆ ಅಪಘಾತವಾಗದೆ ಇರುತ್ತದೆಯೇ?

ಗ್ರಾಮಾಂತರ ಪ್ರದೇಶಗಳಲ್ಲಿ ಇಂಡಿಕೇಟರ್‌ ಬಳಸದೆ, ಕೈಮೂಲಕವೂ ಸೂಚನೆಗಳನ್ನು ನೀಡದೇ ತಿರುವುಗಳಲ್ಲಿ ಸಂಚರಿಸುತ್ತಾರೆ. 18ರಿಂದ 25ರ ವಯಸ್ಸಿನ ಯುವಕರಂತೂ ಬೈಕ್‌ ಅನ್ನು ಅತಿ ವೇಗವಾಗಿ ಚಲಾಯಿಸುವುದೇ ಹೆಚ್ಚು. ಕಾರ್, ಬೈಕ್‌ಗಳಲ್ಲಿ ಅಳವಡಿಸುವ ಆಧುನಿಕ ಎಲ್ಇಡಿ ಹೆಡ್‌ಲೈಟ್‌ಗಳಿಂದ ರಾತ್ರಿ ಹೊತ್ತು ಸಂಚರಿಸುವ ವಾಹನ ಸವಾರರಿಗೆ ಜೀವವೇ ಬಾಯಿಗೆ ಬಂದಂತೆ ಆಗಿರುತ್ತದೆ. ಕೆಲವರು ಶೋರೂಂಗಳಲ್ಲಿ ಅಳವಡಿಸಿದ ಹೆಡ್‌ಲೈಟ್‌ ಗಳನ್ನು ತೆಗೆಸಿ ಹೆಚ್ಚು ವೋಲ್ಟೇಜ್‌ನ ಲೈಟ್‌ಗಳನ್ನು ಹಾಕಿಸಿರುತ್ತಾರೆ. ಇವೆಲ್ಲವನ್ನೂ ನಿಯಂತ್ರಿಸದೆ ನಾವು ಅಪಘಾತಗಳನ್ನು ತಡೆಯುವುದಾದರೂ ಹೇಗೆ?

-ಮಲ್ಲಿಕಾರ್ಜುನ ಸಾಗರ್ ಜಿ.ಆರ್., ಕಳಸ, ಮೂಡಿಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.