ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಸಂದರ್ಭದಲ್ಲಿ, ಐದು ಪ್ರತಿಜ್ಞೆಗಳನ್ನು ಕೈಗೊಳ್ಳುವಂತೆ ಜನರಿಗೆ ಪ್ರಧಾನಿ ಕರೆ ನೀಡಿದ್ದರಲ್ಲಿ, ನಾರಿ ಶಕ್ತಿಗೆ ಬಲ ಹಾಗೂ ಲಿಂಗ ಸಮಾನತೆಗೆ ಒತ್ತು ನೀಡುವುದೂ ಸೇರಿವೆ. ಆದರೆ ಮನುಕುಲದ ಅತ್ಯಂತ ಅನಾಗರಿಕ ಕೃತ್ಯವಾದ, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರವು ಕ್ಷಮಾಪಣಾ ನೀತಿ ಅನ್ವಯ ಬಿಡುಗಡೆ ಮಾಡಿರುವುದು ವಿಪರ್ಯಾಸ. ಇದೇ ಏನು ನಾರಿ ಶಕ್ತಿಗೆ ನೀಡುವ ಪುರಸ್ಕಾರ?
ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಕೆಲವು ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವುದು ಸಹಜ. ಅದಕ್ಕೆ ಅನಿರೀಕ್ಷಿತ, ಆಕಸ್ಮಿಕ, ಕ್ಷುಲ್ಲಕ ಕಾರಣ, ಕೋಪ, ಆವೇಶದಿಂದ ಮಾಡಿದ ಅಥವಾ ಮಾಡಿಲ್ಲದ ತಪ್ಪಿಗಾಗಿ ಶಿಕ್ಷೆ ಅನುಭವಿಸುತ್ತಿರುವ, ಸನ್ನಡತೆಯುಳ್ಳ ಯಾರೂ ಇರಲಿಲ್ಲವೇ? ಅತ್ಯಾಚಾರ ಎಂಬುದು, ತಪ್ಪು ಎಂದು ಗೊತ್ತಿದ್ದೂ ಮಾಡುವ ಪುರುಷ ಅಹಂಕಾರದ ಅತಿಹೀನ ಹಾಗೂ ಪೈಶಾಚಿಕ ಕೃತ್ಯವಾಗಿದೆ. ಇಂತಹ ಅಪರಾಧಿಗಳನ್ನು ಹೇಗೆ ಬಿಡುಗಡೆಗೊಳಿಸಿದಿರಿ? ಇದರಿಂದ ಸಮಾಜಕ್ಕೆ ಏನು ಸಂದೇಶ ನೀಡುತ್ತೀರಿ?
-ಸುವರ್ಣ ಸಿ.ಡಿ.,ತರೀಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.