ಯಂತ್ರಗಳ ಭಾಷೆ ಎಂದು ಪರಿಗಣಿಸಲಾಗಿದ್ದ ಬೈನರಿ ಭಾಷೆಯು ಇಂದು ಮನುಷ್ಯರ ಭಾಷೆಯೂ ಆಗುತ್ತಿರುವುದರ ಕುರಿತ ಎಚ್.ಕೆ.ಶರತ್ ಅವರ ಲೇಖನ (ಸಂಗತ, ಅ. 3) ಅರ್ಥಪೂರ್ಣವಾಗಿದೆ. ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವದಿಂದ, ಅತಿಯಾದ ಮಾಹಿತಿ ಲಭ್ಯವಾಗುವ ಕಾರಣದಿಂದ ಹಾಗೂ ಹಣಕ್ಕೆ ಪ್ರಾಧಾನ್ಯತೆ ಸಿಕ್ಕಿರುವುದರಿಂದ ಜನರು ಸೂಕ್ಷ್ಮಮತಿಗಳಾಗಿದ್ದಾರೆ. ಕೂಡು ಕುಟುಂಬದ ಕಲ್ಪನೆ ಮಾಯವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಬೈನರಿ ಧೋರಣೆಯು ಹತ್ತಿರದವರನ್ನು ದೂರ ಮಾಡುತ್ತಿರುವುದು ವಿಪರ್ಯಾಸ.
‘ಸಂವಹನ ಕಲೆ’ ಎಂಬ ವ್ಯಾವಹಾರಿಕ ಭಾಷೆಯನ್ನು ಬಳಸಲು ಆರಂಭಿಸಿರುವುದು ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಆಗದಿರುವುದಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗದು. ಇದಲ್ಲದೆ, ಸಾಮಾಜಿಕ ಸಂಬಂಧ ಬೆಸೆಯಲು ಬಳಸುವ ವಾಟ್ಸ್ಆ್ಯಪ್ ಭಾಷೆ ಇಂತಹ ಮಾನಸಿಕತೆಗೆ ತನ್ನ ಕೊಡುಗೆ ನೀಡಿದೆ. ಇದಕ್ಕೆ ಇಂಬು ಕೊಡುವಂತೆ, ಅನುಸರಿಸಲಾಗುತ್ತಿರುವ ಶೈಕ್ಷಣಿಕ ಮೌಲ್ಯಮಾಪನ ಪದ್ಧತಿಯು ಬೈನರಿ ಕನ್ನಡಕ್ಕೆ ಎಡೆಮಾಡಿದೆ. ಒಟ್ಟಿನಲ್ಲಿ, ನಮ್ಮ ವಿವೇಕಸೌಧದ ಅಡಿಪಾಯ ಸಡಿಲವಾಗದಂತೆ ನೋಡಿಕೊಳ್ಳಬೇಕಾಗಿದೆ.
-ಪ್ರೊ. ಸಂಜೀವ ದೇಶಪಾಂಡೆ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.