‘ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಗಷ್ಟೇ ಸಾಧ್ಯ. ಪ್ರಾದೇಶಿಕ ಪಕ್ಷಗಳಿಗೆ ಸಿದ್ಧಾಂತವಿಲ್ಲ, ಹೋರಾಡುವುದಕ್ಕೆ ಅವುಗಳಿಂದ ಸಾಧ್ಯವಿಲ್ಲ’ ಎಂದಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಪ್ರ.ವಾ., ಮೇ 16). ಅವರ ಈ ಅಭಿಪ್ರಾಯ ಕೇಳಿದರೆ ಕಾಂಗ್ರೆಸ್ ಪಕ್ಷ ಇನ್ನೂ ಪಾಠ ಕಲಿತಿಲ್ಲವೆಂದೇ ಅನ್ನಿಸುತ್ತದೆ! ಡಿಎಂಕೆ, ಟಿಎಂಸಿ, ಟಿಆರ್ಎಸ್, ಎಎಪಿಯಂತಹ ಪ್ರಾದೇಶಿಕ ಪಕ್ಷಗಳು ಇಂದು ಜನಮಾನಸದಲ್ಲಿ ವಿಶ್ವಾಸ ಗಳಿಸಿ ಅಧಿಕಾರ ಹಿಡಿದಿವೆ. ಅಂಥ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಇಂದು ಯಾವ ರಾಷ್ಟ್ರೀಯ ಪಕ್ಷವೂ ಅಧಿಕಾರಕ್ಕೆ ಬರಲಾಗದು. ಪ್ರಾದೇಶಿಕ ಪಕ್ಷವೆಂದರೆ ಅದು ಆಯಾ ರಾಜ್ಯದ ಸ್ವಾಭಿಮಾನದ ಸಂಕೇತವಾಗಿದೆಯಷ್ಟೆ.
ಇಷ್ಟು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿಯು ಭಾಷೆ, ನೀರು, ರೈಲು, ತೆರಿಗೆ ಹಂಚಿಕೆ ಯಂತಹ ವಿಚಾರಗಳಲ್ಲಿ ಅನ್ಯಾಯ ಮಾಡುತ್ತಲೇ ಬಂದಿವೆ. ಹೀಗಾಗಿ ಒಕ್ಕೂಟ ವ್ಯವಸ್ಥೆಯ ನಮ್ಮ ದೇಶದಲ್ಲಿ ಆಯಾ ರಾಜ್ಯದ ಜನರು ಸಂವಿಧಾನಾತ್ಮಕವಾಗಿಯೇ ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ತಮ್ಮ ಸ್ವಾಭಿಮಾನವನ್ನು ಮೆರೆಯುತ್ತಿದ್ದಾರೆ. ತಮ್ಮ ಹಕ್ಕನ್ನು ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಾರೆ. ಹೀಗಾಗಿ ಇಂದು ಯಾರೂ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸುವಂತಿಲ್ಲ. ಇಂತಹುದರಲ್ಲಿ ರಾಹುಲ್ ಗಾಂಧಿ ಅವರು ಪ್ರಾದೇಶಿಕ ಪಕ್ಷಗಳನ್ನು ಅನುಮಾನಿಸುತ್ತಿರುವುದು ಅವರ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ.
- ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.