ಮೊಸರಿನಲ್ಲೂ ಕಲ್ಲು ಹುಡುಕುವವರಂತೆ, ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಪ್ರತಿ ನಿರ್ಧಾರದ ಬಗ್ಗೆಯೂ ಕೊಂಕು ನುಡಿಯುತ್ತಿದ್ದ ಕೆಲವು ಕಾಂಗ್ರೆಸ್ ನಾಯಕರ ಧೋರಣೆ ಹಠಾತ್ತನೆ ಬದಲಾಗಿದ್ದು ಆಶ್ಚರ್ಯ ತರಿಸಿದೆ.
ಮೋದಿಯವರ ಕಡು ವಿರೋಧಿಗಳಾಗಿದ್ದ ಜೈರಾಮ್ ರಮೇಶ್, ಅಭಿಷೇಕ್ ಮನು ಸಿಂಘ್ವಿ, ಶಶಿ ತರೂರ್ ಮುಂತಾದ ನಾಯಕರು ಮೋದಿ ಕುರಿತ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದು ವರದಿಯಾಗಿದೆ (ಪ್ರ.ವಾ., ಆ.24).
ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ‘ಮೋದಿ ಅವರ ಆಡಳಿತ ಮಾದರಿಯು ಸಂಪೂರ್ಣವಾಗಿ ನಕಾರಾತ್ಮಕ ಅಂಶಗಳನ್ನು ಒಳಗೊಂಡಿಲ್ಲ, ಅವರ ಎಲ್ಲಾ ಯೋಜನೆಗಳನ್ನು ಟೀಕಿಸುವುದು ಸರಿಯಲ್ಲ’ ಎಂದಿದ್ದಾರೆ. ಇವರ ಅಭಿಪ್ರಾಯಕ್ಕೆ ಸಿಂಘ್ವಿ ಮತ್ತು ತರೂರ್ ದನಿಗೂಡಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಸಾರಾಸಗಟಾಗಿ ಟೀಕಿಸುವುದರಿಂದ ಕಾಂಗ್ರೆಸ್ಸಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಆ ಪಕ್ಷವು ಮನಗಾಣಬೇಕು. ಸಕ್ರಿಯ ವಿರೋಧ ಪಕ್ಷವಾಗಿ, ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಿ ಆಡಳಿತ ನಡೆಸುವವರನ್ನು ಎಚ್ಚರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿ. ಮೋದಿಯವರನ್ನು ಹೊಗಳಿದ ತಮ್ಮದೇ ಪಕ್ಷದ ಮುಂಚೂಣಿಯ ನಾಯಕರನ್ನು ಟೀಕಿಸುವುದನ್ನು ಬಿಟ್ಟು, ಅಂಥ ಮಾತುಗಳನ್ನಾಡಿದ್ದರ ಹಿಂದಿನ ಉದ್ದೇಶ, ಅದರ ಅಂತರಾರ್ಥ ಏನೆಂಬುದನ್ನು ಅರಿಯಲಿ.
-ಮಣಿಕಂಠ ಪಾ. ಹಿರೇಮಠ,ಚವಡಾಪೂರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.