ಹಿಂದಿನ ಲೋಕಸಭಾ ಚುನಾವಣೆಯಲ್ಲಿ ನೀಡಿದ ಸ್ಥಾನಗಳಿಗಿಂತ ಹೆಚ್ಚು ಸ್ಥಾನ ಕೊಟ್ಟು, ನರೇಂದ್ರ ಮೋದಿಯವರನ್ನು ದೇಶದ ಜನ ಬೆಂಬಲಿಸಿದ್ದಾರೆ. ಆದರೆ, 2014ರಲ್ಲಿ ಕೊಟ್ಟಿದ್ದ ಭರವಸೆಗಳನ್ನು ಕುರಿತ ಚರ್ಚೆ ಈ ಬಾರಿಯ ಚುನಾವಣೆಯಲ್ಲಿ ಮುನ್ನೆಲೆಗೆ ಬಾರದಿದ್ದದ್ದು ದುರದೃಷ್ಟಕರ. ಇದರಲ್ಲಿ ವಿರೋಧ ಪಕ್ಷದವರ ಪಾಲು ಬಹಳಷ್ಟಿದೆ. ಅದೇನೇ ಇರಲಿ, ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರಲು ಮೋದಿಯವರಿಗೆ ಮತ್ತೊಂದು ಸುವರ್ಣಾವಕಾಶ ದೊರೆತಿದೆ.
ಕಳೆದ ಬಾರಿಯಂತೆ ಅನಗತ್ಯ ವಿಷಯಗಳ ಬಗ್ಗೆ ಗಮನ ಹರಿಸದಿದ್ದರೆ ಅದು ಸಾಧ್ಯ. ಎಲ್ಲದಕ್ಕೂ ನೆಹರೂ ಪರಿವಾರವನ್ನು, ಕಾಂಗೆಸ್ಸನ್ನು ಎಳೆದು ತರುವ ಪ್ರವೃತ್ತಿ ನಿಲ್ಲಿಸಬೇಕು. ನಮೋ ಟಿ.ವಿ ಇದ್ದಕ್ಕಿದಂತೆ ಅಂತರ್ಧಾನವಾದಂತೆ ಬಿಜೆಪಿ ಐ.ಟಿ ಸೆಲ್ ಅನ್ನೂ ಬಂದ್ ಮಾಡಿ, ವೃಥಾ ಆತ್ಮಪ್ರಶಂಸೆಯಲ್ಲಿ ಕಾಲ ಕಳೆಯುವುದನ್ನು ನಿಲ್ಲಿಸಬೇಕು.
ಮಹಿಳೆಯರು, ರೈತರು, ಕಾರ್ಮಿಕರು, ದಲಿತರ ಕೂಗಿಗೆ ಕಿವಿಗೊಡಬೇಕು. ಅವರಿಗೆ ಸಾಂತ್ವನ ಹೇಳುವುದರ ಜತೆಗೆ, ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು.ತಾವು ಮಾತ್ರ ದೇಶಭಕ್ತರು, ತಮ್ಮನ್ನು ಪ್ರಶ್ನಿಸುವವರೆಲ್ಲ ದೇಶದ್ರೋಹಿಗಳು ಎಂದು ಬಿಂಬಿಸುವ ಪ್ರವೃತ್ತಿಯನ್ನು ಬಿಜೆಪಿಯವರು ಮೊದಲು ಬಿಡಬೇಕು. ಸರ್ಕಾರದ ಕಾರ್ಯಕ್ರಮಗಳ ಪ್ರಗತಿಗೆ ಸಂಬಂಧಿಸಿದ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿರಬೇಕು.
– ಚಂದ್ರಪ್ರಭಕಠಾರಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.