ADVERTISEMENT

ಭಾಷೆಯ ಅಸ್ಮಿತೆ ಉಳಿವಿಗಾಗಿ ಶ್ರಮಿಸೋಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 19:30 IST
Last Updated 2 ಸೆಪ್ಟೆಂಬರ್ 2021, 19:30 IST

ಮೆಟ್ರೊ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿದ್ದರ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವ ಸುನಿಲ್‌ ಕುಮಾರ್‌ ಅವರು ಸೂಚಿಸಿರುವುದು ಅಭಿನಂದನಾರ್ಹ (ಪ್ರ.ವಾ., ಸೆ. 2). ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ರಾಜ್ಯ ಭಾಷೆಯ ಬಳಕೆ ಬಗ್ಗೆ ಅಸಡ್ಡೆ ತೋರುವುದನ್ನು ತಡೆಯಲು ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ ಎನ್ನುವುದಕ್ಕೆ, ಮೈಸೂರು ರಸ್ತೆ- ಕೆಂಗೇರಿಯ ಮೆಟ್ರೊ ವಿಸ್ತರಿತ ಮಾರ್ಗದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯ ಪರದೆಯ ಮೇಲೆ ಕನ್ನಡ ಭಾಷೆಯನ್ನು ಕಡೆಗಣಿಸಿದ್ದೇ ನಿದರ್ಶನ. ನಮ್ಮ ಭಾಷೆಗೆ ತೊಡಕುಂಟಾಗದಂತೆ ನೋಡಿಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. ಆದರೂ ಇದರ ಆದೇಶಕ್ಕೆ ಯಾವುದೇ ಸಂಸ್ಥೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡದಿರುವುದು ವಿಪರ್ಯಾಸ.

ಈಗ ಸಚಿವರು ಸೂಚಿಸಿರುವಂತೆ ಶಿಸ್ತು ಕ್ರಮ ಜರುಗಿಸಿದಾಗ ಮಾತ್ರ ನಮ್ಮ ನೆಲ, ಜಲ, ಭಾಷೆಯ ಸ್ವಂತಿಕೆ ಉಜ್ವಲವಾಗುತ್ತದೆ. ಈ ಆದೇಶ ಬರೀ ಕಾಗದದ ರೂಪದಲ್ಲಿ ಉಳಿಯದೆ, ಅದರ ಮೂಲ ಉದ್ದೇಶ ಈಡೇರುವವರೆಗೆ ಸಂಬಂಧಿಸಿದ ಎಲ್ಲರೂ ಶ್ರಮಿಸಬೇಕು. ಕನ್ನಡದ ಬಗ್ಗೆ ಇಲ್ಲಿಯವರೆಗೆ ತೋರಿರುವ ನಿರ್ಲಕ್ಷ್ಯ ಸಾಕು. ಈಗಲಾದರೂ ಕನ್ನಡದ ಅಸ್ಮಿತೆ ಉಳಿಸಲು ಶ್ರಮಿಸೋಣ.

ಚಾಂದ್ ಬಾಷ, ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT