ಬೆಂಗಳೂರಿನಲ್ಲಿ ನಡೆದ ಹವ್ಯಕ ವಿಶ್ವ ಸಮ್ಮೇಳನದಲ್ಲಿ ಮಾತನಾಡಿದ ವೀಣಾ ಬನ್ನಂಜೆ, ‘ಈಗಿನ ಸಾಫ್ಟ್ವೇರ್ ಜಗತ್ತು ಬಕೆಟ್ ಹಿಡಿಯುವ ಜಗತ್ತು. ಇಂದು ಬಕೆಟ್ ಹಿಡಿದರೆ ನಾಳೆ ಏನೋ ಸಿಗುತ್ತದೆ ಎನ್ನುವ ಯೋಚನೆ...’ ಎಂದು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಡಿ. 30). ಅವರು ಎಲ್ಲರಿಗೂ ಅನ್ವಯಿಸಿ ಈ ಹೇಳಿಕೆ ನೀಡಿರುವುದು ಸಮಂಜಸವಲ್ಲ.
ಸ್ವಾಭಿಮಾನವಿಲ್ಲದ ಕೆಲವರು ತಮ್ಮ ಏಳಿಗೆ, ಸ್ವಾರ್ಥಕ್ಕಾಗಿ ಬಕೆಟ್, ಚಂಬು ಏನಾದರೂ ಹಿಡಿಯಬಹುದು. ಐ.ಟಿ. ಜಗತ್ತಿನಲ್ಲಿ ಕೌಶಲವಿದ್ದರೆ ಎಷ್ಟು ಬೇಕಾದರೂ ಬೆಳೆಯಬಹುದು, ಎಷ್ಟು ಬೇಕಾದರೂ ಸಂಪಾದಿಸಬಹುದು. ಇದನ್ನು ನಾನು ಒಬ್ಬ ಸ್ವಾಭಿಮಾನಿ ಐ.ಟಿ. ಉದ್ಯೋಗಿಯಾಗಿ ಅನುಭವದಿಂದ ಹೇಳುತ್ತಿದ್ದೇನೆ. ಇದು ಬಹುತೇಕ ಎಲ್ಲ ರಂಗಗಳಿಗೂ ಅನ್ವಯವಾಗುತ್ತದೆ.
ಕೆಲವರು (ಅಥವಾ ಬಹುತೇಕರು) ತಪ್ಪು ದಾರಿಯಲ್ಲಿ ನಡೆದು ಆರ್ಥಿಕ ಉನ್ನತಿ ಪಡೆಯುತ್ತಾರೆ ಎಂದರೆ ನಾವು ಅದನ್ನು ಒಪ್ಪಿಕೊಳ್ಳುವ ಅಥವಾ ಹಾಗೆಯೇ ನಡೆದುಕೊಳ್ಳುವ ಅಗತ್ಯ ಇಲ್ಲ. ಅಂಥ ವಾತಾವರಣವೇ ನಮ್ಮ ಮೂಲಗುಣವನ್ನು ಪರೀಕ್ಷಿಸುವುದು. ವೀಣಾ ಅವರು ತಮ್ಮ ಅಭಿಪ್ರಾಯವನ್ನು ಸಾರ್ವತ್ರೀಕರಣಗೊಳಿಸಿದ್ದು ಒಪ್ಪುವಂಥ ವಿಚಾರವಲ್ಲ.
ಅನಿಲ್ ಚನ್ನೇಗೌಡ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.