‘ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಪಾಠ ಕಲಿಯಲಿ’ ಎಂಬ ಸಂಪಾದಕೀಯ (ಪ್ರ.ವಾ., ಜೂನ್ 8) ಸಕಾಲಿಕವಾಗಿದೆ. ಆದರೆ ಈ ಪ್ರಕರಣದಲ್ಲಿ ಕಲಿಯಬೇಕಾದದ್ದು ಬಿಜೆಪಿ ಮಾತ್ರವಲ್ಲ, ಎಲ್ಲ ರಾಜಕೀಯ ಪಕ್ಷಗಳಿಗೂ ಪಾಠ ಇದೆ. ಯಾವ ರಾಜಕೀಯ ಪಕ್ಷವೂ ಭಾರತವನ್ನು ವೈಶ್ವಿಕ ಮಟ್ಟದಲ್ಲಿ, ಒಂದು ಆರ್ಥಿಕ ಅಥವಾ ಸ್ವತಂತ್ರ ರಾಜಕೀಯ ಘಟಕವಾಗಿ ಕಂಡಂತೆಯೇ ಇಲ್ಲ. ದೇಶ ನಡೆಸುತ್ತೇವೆಂಬ ನಮ್ಮ ಜಂಬದ ಹುರಿಯಾಳುಗಳಿಗೆ ತಮ್ಮ ಕ್ಷೇತ್ರದಾಚೆಗಿನ ಪ್ರಪಂಚ ಕಾಣಿಸುತ್ತದೆಯೇ ಎನ್ನುವುದೇ ಅನುಮಾನ. ಅವರ ವಿದ್ಯೆ, ಬುದ್ಧಿ, ದೃಷ್ಟಿಕೋನವೆಲ್ಲಾ ಎದುರಾಳಿಗಿಂತ ನಾಲ್ಕಾರು ಮತಗಳನ್ನು ಹೆಚ್ಚು ಪಡೆದು ಸೀಟು ಗೆಲ್ಲುವಷ್ಟಕ್ಕೇ ಸೀಮಿತ. ಗೆದ್ದ ಮೇಲೆ ಅದನ್ನು ಉಳಿಸಿಕೊಳ್ಳುವ ಹುಸಿ ಕಸರತ್ತು. ಅದಕ್ಕಾಗಿ ಭಾವೋದ್ರೇಕವನ್ನು ಬಡಿದೆಬ್ಬಿಸಿ, ಅಮಾಯಕರನ್ನು ಬಲಿ ಕೊಟ್ಟು, ಅವರು ಗಳಿಸುವ ಹೀರೊ ಪಟ್ಟ ಶಾಶ್ವತವೇ?
ಒಂದು ಪಕ್ಷವನ್ನು ಹಣಿಯುವ ಆವೇಶದಲ್ಲಿ, ಯಾವತ್ತೋ ಯಾವ ದೇಶದಲ್ಲೋ ಹುಟ್ಟಿ ತತ್ವಾಚಾರಗಳನ್ನು ಹೇಳಿದ ಒಬ್ಬ ಪ್ರವಾದಿಯ ಖಾಸಗಿ ಬದುಕಿನ ವದಂತಿಯನ್ನು ಕೆದಕುವುದು, ಆ ಮೂಲಕ ಜಾಗತಿಕ ಸಮುದಾಯವೊಂದನ್ನು ಎದುರು ಹಾಕಿಕೊಳ್ಳುವುದು ಪ್ರಬುದ್ಧತೆಯೆನಿಸೀತೇ ಎಂಬ ಬಗ್ಗೆ ರಾಜಕೀಯ ಪಕ್ಷಗಳು ಚಿಂತಿಸಬೇಕು. ‘ವೋಟ್ ಬ್ಯಾಂಕ್’ ಪರಿಕಲ್ಪನೆಯ ತಾಯಿ, ಕಾಂಗ್ರೆಸ್ ಪಕ್ಷವೇ. ಅದನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸಾಹಸ ಬಿಜೆಪಿಯದ್ದಾಗಿದೆ.
-ಆರ್.ಕೆ.ದಿವಾಕರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.