ಉತ್ತಮ ಕೆಲಸ ಮಾಡುವ ಅಧಿಕಾರಿ ವರ್ಗಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುವುದು ಸರ್ವೇ ಸಾಮಾನ್ಯ. ಆದರೆ ಇತ್ತೀಚೆಗೆ ಈ ಮೆಚ್ಚುಗೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ, ಲೈಕ್ ಹೆಚ್ಚುತ್ತಾ ಕೊನೆಯಲ್ಲಿ ಅಭಿಮಾನಿಗಳ ಬಳಗ ಅಥವಾ ಕ್ಲಬ್ ಪ್ರಾರಂಭವಾಗಿ, ಪರ-ವಿರೋಧ, ಕ್ರಿಯೆ- ಪ್ರತಿಕ್ರಿಯೆಗಳು ನಡೆಯುತ್ತಿರುತ್ತವೆ. ಹಾಗೆಯೇ ಈ ಮೆಚ್ಚುಗೆಯ ಅಮಲು ಏರುತ್ತಲೇ ಹೋಗುತ್ತದೆ. ಅಭಿಮಾನಿಗಳ ಬಳಗದ ಸದಸ್ಯರ ಸಂಖ್ಯೆ ಮತ್ತು ಅದರ ಒಲವು ಅರಿತ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಕಡೆಗೆ ಅವರನ್ನು ಎಳೆಯಲು ಪ್ರಾರಂಭಿಸುತ್ತವೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್, ಸ್ಥಾನಮಾನಗಳನ್ನು ನೀಡುವುದಾಗಿ ಆಮಿಷ ನೀಡುತ್ತವೆ. ರಾಜಕೀಯ ಸೂಜಿಗಲ್ಲಿನ ಎಳೆತ ಎಂತಹ ಕಠೋರ ಅಧಿಕಾರಿಗಳನ್ನೂ ಸೋಲಿಸಿ ಬಿಡುತ್ತದೆ.
ಸರ್ಕಾರಿ ಹುದ್ದೆಯಲ್ಲಿದ್ದಾಗ ರಾಜಕೀಯ ಸೇರುವ ತವಕದಿಂದ ತಮ್ಮ ಅಧಿಕಾರವನ್ನು ಅವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಸರ್ಕಾರಿ ಸೇವೆಯಿಂದ ಬಿಡುಗಡೆ ಆದ ನಂತರ ಕನಿಷ್ಠ ಎರಡು ವರ್ಷ ಯಾವುದೇ ರಾಜಕೀಯ ಪಕ್ಷ ಸೇರದಂತೆ ಕೂಲಿಂಗ್ ಪೀರಿಯಡ್ ಕಡ್ಡಾಯ ಮಾಡಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಆದರೆ ಬಿಜೆಪಿಯೇ ಅಧಿಕಾರಕ್ಕೆ ಬಂದಾಗ ಆ ವಿಷಯ ಮುನ್ನೆಲೆಗೆ ಬರಲೇ ಇಲ್ಲ. ಸರ್ಕಾರಿ ಹುದ್ದೆ ಮತ್ತು ಕಚೇರಿಯ ದುರ್ಬಳಕೆ ತಪ್ಪಿಸಲು ಕೂಲಿಂಗ್ ಪೀರಿಯಡ್ ಕಡ್ಡಾಯವಾಗಲಿ.
- ಗಣಪತಿನಾಯ್ಕ,ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.