ಜಪಾನ್, ಸ್ವೀಡನ್, ದಕ್ಷಿಣ ಕೊರಿಯಾದ ಜನರಲ್ಲಿ ಕೊರೊನಾ ಸೋಂಕಿನ ಕುರಿತು, ಭೌತಿಕ ಅಂತರ ಕಾಯ್ದುಕೊಳ್ಳುವ ಅಗತ್ಯದ ಕುರಿತು ಅರಿವು ಮೂಡಿಸುವತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಜನ ಪರಸ್ಪರ ಹಸ್ತಲಾಘವ ಹಾಗೂ ಅಪ್ಪುಗೆಯಂತಹ ಸಾಂಪ್ರದಾಯಿಕ ಪದ್ಧತಿಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಾರೆ. ಮೇಲಿಂದ ಮೇಲೆ ಸಾಬೂನು ಹಾಗೂ ನೀರಿನಿಂದ ಕೈ ತೊಳೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಪ್ರಮುಖವಾಗಿ ಈ ದೇಶಗಳಲ್ಲಿ ಸೋಂಕಿನ ನಿಯಂತ್ರಣ ಕುರಿತು ಏನೇ ನಿರ್ಣಯ ಕೈಗೊಳ್ಳುವುದಿದ್ದರೂ ರಾಜಕಾರಣಿಗಳು ಅಥವಾ ಅಧಿಕಾರಿಗಳು ಹಸ್ತಕ್ಷೇಪ ಮಾಡುವುದಿಲ್ಲ. ಸಾರ್ವಜನಿಕ ಆರೋಗ್ಯ ಪ್ರಾಧಿಕಾರದ ಜನಾರೋಗ್ಯ ತಜ್ಞರು ಮಾತ್ರ ನಿರ್ಣಯ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ. ಸೋಂಕಿನ ಕುರಿತು ಮೇಲಿಂದ ಮೇಲೆ ಪತ್ರಿಕಾಗೋಷ್ಠಿ ನಡೆಸುವುದೂ ಈ ತಜ್ಞರೇ. ಆದರೆ ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣದ ವಿಷಯದಲ್ಲಿ ಎಲ್ಲಾ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ರಾಜಕಾರಣಿಗಳು ಹಾಗೂ ಐಎಎಸ್ ಅಧಿಕಾರಿಗಳು. ಇದುವರೆಗೂ ಒಬ್ಬರೇ ಒಬ್ಬ ತಜ್ಞ ವೈದ್ಯ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದನ್ನು ನಮ್ಮ ರಾಜ್ಯದಲ್ಲಿ ಕಂಡಿಲ್ಲ. ತಜ್ಞ ವೈದ್ಯರು ಈ ಅಧಿಕಾರಿಗಳ ಮಾರ್ಗಸೂಚಿ ಹಾಗೂ ಆದೇಶಗಳನ್ನು ಪಾಲಿಸಬೇಕಾಗಿ ಬಂದಿರುವುದು ಹಾಸ್ಯಾಸ್ಪದವಾಗಿದೆ.
–ಭುವನೇಶ್ವರಿ ಅಚ್ಚೀಗಾಂವ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.