ಕೊರೊನಾದಿಂದ ಉದ್ಯೋಗವಿಲ್ಲದೆ ನಲುಗಿರುವ ‘ಬಡವರಿಗೆ ಉದ್ಯೋಗ ಕೊಡಿ’ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ (ಪ್ರ.ವಾ., ಜೂನ್ 2). ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತರಿ ಯೋಜನೆಯು ಅರ್ಹರನ್ನು ತಲುಪದೆ ಸದ್ದಿಲ್ಲದೆ ನೆಲ ಕಚ್ಚುತ್ತಿದೆ. ಬಹುತೇಕ ಕೂಲಿ ಕಾರ್ಮಿಕರಿಗೆ ಈ ಯೋಜನೆಯಿಂದ ಕೆಲಸ ಹೇಗೆ ಪಡೆಯಬೇಕೆಂಬ ಮಾಹಿತಿ ಇರುವುದಿಲ್ಲ. ಮಾಹಿತಿ ನೀಡುವ ಅಧಿಕಾರಿ ವರ್ಗ ‘ನಮಗೇಕೆ ಈ ಉಸಾಬರಿ’ ಎಂಬ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ. ಪಂಚಾಯತ್ ರಾಜ್ ಇಲಾಖೆ ಕೂಲಿ ನಿಗದಿ ಮಾಡಿ ಕೈ ತೊಳೆದುಕೊಂಡಿದೆ.
ಬಹುತೇಕ ನಗರ ಕೂಲಿಕಾರರು ಕೆಲಸವಿಲ್ಲದೆ ಹಳ್ಳಿ ಸೇರಿರುವ ಈ ಸಮಯದಲ್ಲಿ, ಸರ್ಕಾರದ ಯಾವ ಪ್ಯಾಕೇಜ್ನ ಅವಶ್ಯಕತೆಯೂ ಇಲ್ಲ, ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ನೀಡಿದರೆ ಸಾಕು! ಇದರಿಂದ ಬಿಕ್ಕಟ್ಟಿನ ಸಂದರ್ಭದಲ್ಲೂ ಜನ ನೆಮ್ಮದಿಯಿಂದ ಬದುಕು ನಡೆಸುತ್ತಾರೆ.
-ಪಿ.ಜೆ.ರಾಘವೇಂದ್ರ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.