ADVERTISEMENT

ಚಿಕಿತ್ಸೆ ಜೊತೆಗೆ ಊಟದ ಸವಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 18:07 IST
Last Updated 2 ಜೂನ್ 2021, 18:07 IST

ಇಳಕಲ್‌ನ ಡಾ. ಕಡಪಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅನಾರೋಗ್ಯದ ನಿಮಿತ್ತ ಹೋಗಿದ್ದೆ. ಡಾ. ಮಹಾಂತೇಶ ಕಡಪಟ್ಟಿಯವರು ರೋಗಿಗಳಿಗೆ ಆಕ್ಸಿಮೀಟರ್ ಪ್ರಮಾಣವನ್ನು ದೃಢೀಕರಿಸುತ್ತಾ ಸ್ಥೈರ್ಯ ತುಂಬುತ್ತಿದ್ದರು. ಜೊತೆಗೆ ಆಸ್ಪತ್ರೆಯಲ್ಲಿ ಕೋವಿಡ್-19 ಸಮಯದಲ್ಲಿ ಉಚಿತ ಊಟದ ವ್ಯವಸ್ಥೆ ಕಂಡು ಬೆರಗಾದೆ. ನಿತ್ಯ ಹತ್ತಾರು ಹಳ್ಳಿಗಳಿಂದ ರೋಗಿಗಳು ಬರುತ್ತಾರೆ. ಈಗ ಇಳಕಲ್‌ನಲ್ಲಿ ಖಾನಾವಳಿಗಳು ತೆರೆದಿರುವುದಿಲ್ಲ. ಸಂಬಂಧಿಗಳಿದ್ದರೂ ಯಾರೂ ಬಂದು ಮೊದಲಿನ ದಿನಗಳಂತೆ ಊಟ ಕೊಟ್ಟು ಹೋಗುವುದಿಲ್ಲ. ಅವರಿಗೂ ಲಾಕ್‌ಡೌನ್, ಹಳ್ಳಿಯಿಂದ ಊಟ ತಂದು ಕೊಡಲು ವಾಹನದ ವ್ಯವಸ್ಥೆಯೂ ಇಲ್ಲ. ಹೀಗಾಗಿ ಆಸ್ಪತ್ರೆಯಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿದ್ದು, ರುಚಿ ಶುಚಿಯಾದ ಊಟ ಕೊಡುತ್ತಿದ್ದಾರೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಾ ಊಟಕ್ಕೆ ಮಾಡಿದ್ದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.

ದಿನಕ್ಕೆ 50– 60 ಜನರಿಗಾಗುವಷ್ಟು ಅಡುಗೆ ಮಾಡಿಸಿರುತ್ತಾರೆ ಎಂದರು ಅಲ್ಲಿದ್ದವರು. ಅಷ್ಟು ಜನರಿಗೆ ಊಟ ನೀಡುವುದು ಸುಲಭವಲ್ಲ. ಅದಕ್ಕೆ ಹೃದಯವಂತಿಕೆ ಬೇಕು. ಲಾಕ್‍ಡೌನ್‍ನಲ್ಲಿ ಊಟಕ್ಕಾಗಿ ಪರದಾಡುವುದನ್ನು ತಪ್ಪಿಸಿದ್ದರಿಂದ ರೋಗಿಗಳಲ್ಲಿ ಆತ್ಮಸ್ಥೈರ್ಯ ಬೆಳೆಯುತ್ತದೆ. ಅವರೊಂದಿಗೆ ಬರುವ ಪೋಷಕರೂ ಊಟಕ್ಕಾಗಿ ಅಲೆಯದೆ ಒಂದೇ ಕಡೆ ಇದ್ದು ಲಾಕ್‍ಡೌನ್ ನಿಯಮವನ್ನು ಪಾಲಿಸಿದಂತೆಯೂ ಆಗುತ್ತದೆ. ವೈದ್ಯರ ಇಂತಹ ಕಳಕಳಿ ಕಂಡು ನಾನೂ ಹೊಟ್ಟೆ ತುಂಬಿಸಿಕೊಂಡೆ. ಡಾ. ಮಹಾಂತೇಶ ಅವರಿಗೂ ಅವರ ಪತ್ನಿ ಡಾ. ಶೋಭಾರಾಣಿಯವರಿಗೂ ವೈದ್ಯಕೀಯ ಸೇವೆಯ ಜೊತೆಗೆ ಕೊರೊನಾ ಸಂದರ್ಭದಲ್ಲಿ ಮಾಡುತ್ತಿರುವ ಸಮಾಜ ಸೇವೆಗೆ ಮನದಲ್ಲಿಯೇ ಕೃತಜ್ಞತೆ ಸಲ್ಲಿಸಿ ಹೊರಬಂದೆ.

-ಲಲಿತಾ ಕೆ. ಹೊಸಪ್ಯಾಟಿ,ಹುನಗುಂದ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.