ADVERTISEMENT

ಲಂಗುಲಗಾಮಿಲ್ಲದ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 15:08 IST
Last Updated 4 ಅಕ್ಟೋಬರ್ 2021, 15:08 IST

ರಾಜ್ಯದ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರವಾಸಕ್ಕೆಂದು ಸ್ನೇಹಿತರ ಜೊತೆ ಇತ್ತೀಚೆಗೆ ನಾನು ಚಾರ್ಮಾಡಿ ಘಾಟಿಯ ಮೂಲಕ ಕಾರ್‌ನಲ್ಲಿ ತೆರಳಿದ್ದೆ. ಆದರೆ ಚಾರ್ಮಾಡಿ ಗ್ರಾಮದ ಬಳಿ ಬರುವ ಫಾಲ್ಸ್ ಹತ್ತಿರ ತುಂಬಾ ಕಿರಿಕಿರಿ ಎನಿಸಿತು. ಯಾಕೆಂದರೆ ಈ ರಸ್ತೆಯ ಮೂಲಕ ಬರುವ ಪ್ರವಾಸಿಗರು ಫಾಲ್ಸ್ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಸ್ತೆಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿ, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು ಮತ್ತು ಹಾಡು ಹಾಕಿಕೊಂಡು ರಸ್ತೆ ನಡುವೆಯೇ ಡಾನ್ಸ್ ಮಾಡುತ್ತಿದ್ದರು. ಇದರಿಂದ ಟ್ರಾಫಿಕ್‌ ಜಾಮ್‌ ಆಗಿ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಯಿತು. ರಸ್ತೆಯು ಕಿರಿದಾಗಿರುವುದರಿಂದ ಮತ್ತು ಅಪಾಯಕಾರಿ ತಿರುವುಗಳಿರುವುದರಿಂದ, ಇಂತಹ ಕೃತ್ಯಗಳಿಂದ ಅಪಘಾತಗಳಾಗುವ ಸಂಭವವೂ ಉಂಟು.

ಮೂರು ತಿಂಗಳ ಹಿಂದೆ ಪ್ರವಾಸಿಗರ ಹುಚ್ಚಾಟವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾದ ಪರಿಣಾಮ ಕೆಲ ದಿನಗಳ ಕಾಲ ಪೊಲೀಸ್ ಕಾವಲು ಹಾಕಲಾಗಿತ್ತು. ಈಗ ಅಂತಹ ವ್ಯವಸ್ಥೆ ಇಲ್ಲದ್ದರಿಂದ ಪ್ರವಾಸಿಗರಿಗೆ ಲಂಗುಲಗಾಮು ಇಲ್ಲದಂತಾಗಿದೆ. ಇಲ್ಲಿ ಮುಂದೆ ಯಾವುದೇ ರೀತಿಯ ದೊಡ್ಡ ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.

-ಮುರುಗೇಶ ಡಿ.,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.