ಶ್ರೀಕ್ಷೇತ್ರ ಸಿಗಂದೂರು ದೇವಸ್ಥಾನದ ವತಿಯಿಂದ ಕೆಲವು ಸರ್ಕಾರಿ ಶಾಲೆಗಳು ಸುಣ್ಣ, ಬಣ್ಣದ ಜೊತೆ ಸ್ವಚ್ಛತೆಯಿಂದ ಕಂಗೊಳಿಸುವ ಚಿತ್ರ ನೋಡಿ (ಪ್ರ.ವಾ., ಜ. 11) ಸಂತಸವಾಯಿತು. ದೇವಾಲಯ ಮಂಡಳಿಯ ಈ ಸಾಮಾಜಿಕ ಕಳಕಳಿಯ ಬಗ್ಗೆ ಅಲ್ಲಿನ ಜನರು ಹರ್ಷ ಪಟ್ಟಿದ್ದಾರೆ. ಇಂತಹ ಸಾಮಾಜಿಕ ಸೇವೆಯು ಖಾಸಗಿ ಮಂಡಳಿಯ ಅಧೀನದಲ್ಲಿ ಇರುವ ದೇವಸ್ಥಾನಗಳ ವತಿಯಿಂದ ಆಗಾಗ್ಗೆ ನಡೆಯುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಆದರೆ ಸರ್ಕಾರದ ಆಡಳಿತಕ್ಕೆ ಒಳಪಟ್ಟ ದೇವಾಲಯಗಳಿಂದ ಇಂತಹ ಜನಪರ ಕೆಲಸ ನಡೆಯುವುದನ್ನು ಇದುವರೆಗೂ ನೋಡಿಲ್ಲ ಎಂಬುದು ವಿಪರ್ಯಾಸ.
ಮುಜರಾಯಿ ಇಲಾಖೆಯ ದೇವಾಲಯಗಳ ಹುಂಡಿಗಳಲ್ಲಿ ಭಕ್ತರು ಅರ್ಪಿಸುವ ಸಾವಿರಾರು ಕೋಟಿ ರೂಪಾಯಿ ಜನರಿಗೆ ಉಪಯೋಗ ಆಗುತ್ತಿಲ್ಲ. ಜನರಿಂದ ಭಕ್ತಿ ರೂಪದಲ್ಲಿ ಬಂದ ಹಣ ಮತ್ತೆ ಜನರಿಗೆ ಸೇವೆ ರೂಪದಲ್ಲಿ ವಿನಿಯೋಗವಾಗುವುದು ಒಳಿತಲ್ಲವೇ? ಕೆರೆಯ ನೀರನು ಕೆರೆಗೆ ಚೆಲ್ಲಿ... ಎಂಬ ದಾಸವಾಣಿ ಸರ್ಕಾರದ ಕಿವಿಗೆ ಬೀಳಲಿ.
- ವಿ.ತಿಪ್ಪೇಸ್ವಾಮಿ,ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.