ADVERTISEMENT

ಆಯೋಗ ಆತ್ಮಾವಲೋಕನ ಮಾಡಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 19:31 IST
Last Updated 28 ಅಕ್ಟೋಬರ್ 2020, 19:31 IST

ಶಿರಾ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಂಚುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದರಲ್ಲಿ ಆಶ್ಚರ್ಯ ಪಡುವಂತಹದ್ದೇನಿದೆ? ಹೌದು, ಒಂದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಒಂದಲ್ಲ ಒಂದು ರೀತಿಯಲ್ಲಿ ಕೆಲವು ಮತದಾರರಿಗೆ ಅಭ್ಯರ್ಥಿಗಳು ದುಡ್ಡು ಹಂಚುತ್ತಾರೆ. ಚುನಾವಣಾ ಆಯೋಗ ಇತ್ತೀಚೆಗೆ ಹಲ್ಲುಕಿತ್ತ ಹಾವಿನಂತಾಗಿದೆ. ಚುನಾವಣೆಯ ಸಮಯದಲ್ಲಿ ಅಕ್ರಮವಾಗಿ ಸಾಗಿಸುವ ಹಣವನ್ನು ಆಯೋಗ ವಶಪಡಿಸಿಕೊಳ್ಳುತ್ತದೆ. ಆದರೆ ಅದು ಯಾರಿಗೆ ಸೇರಿದ್ದು, ಅದರ ಹಿಂದಿರುವವರು ಯಾರು ಎಂಬುದನ್ನು ಎಷ್ಟು ಪ್ರಕರಣಗಳಲ್ಲಿ ತನಿಖೆ ಮಾಡಿ, ಎಷ್ಟು ಜನರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದೆ? ಈ ಕುರಿತು ಆಯೋಗವು ಆತ್ಮಾವಲೋಕನ ಮಾಡಿಕೊಳ್ಳಲಿ.

ಕೆಲವು ದಿನಗಳ ಹಿಂದೆ ಒಬ್ಬ ಜನಪ್ರತಿನಿಧಿ ‘ಹಣವಿಲ್ಲದೆ ಚುನಾವಣೆ ಎದುರಿಸಲು ಸಾಧ್ಯವಿಲ್ಲ’ ಎಂದು ವಿಧಾನಸಭೆಯ ಕಲಾಪದಲ್ಲಿಯೇ ರಾಜಾರೋಷವಾಗಿ ಹೇಳಿಕೆ ನೀಡಿದ್ದರು. ಇದು ವಾಸ್ತವ ಕೂಡ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವ ಗಾದೆ ಮಾತಿನಂತೆ ಆಗಿದೆ ಪ್ರಜೆಗಳು ಮತ್ತು ಜನಪ್ರತಿನಿಧಿಗಳ ಪಾಡು. ಚುನಾವಣೆ ಮುಗಿಯುವವರೆಗೆ ಮಾತ್ರ ಇದರ ಬಗ್ಗೆ ಚರ್ಚೆ, ನಂತರ ಎಲ್ಲಾ ಜಾಣಮರೆವು!

ರಾಜು ಬಿ. ಲಕ್ಕಂಪುರ, ಜಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.