‘ನಕಲಿ ವಿಶ್ವವಿದ್ಯಾಲಯಗಳು ಅಪರಾಧಿ ಹಿನ್ನೆಲೆ ಹಾಗೂ ಅನಕ್ಷರಸ್ಥರಿಗೆ ಗೌರವ ಡಾಕ್ಟರೇಟ್ ನೀಡುತ್ತಿವೆ’ ಎಂದು ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ (ಪ್ರ.ವಾ., ನ. 29).ಅರ್ಜಿದಾರರ ಮೂಲಉದ್ದೇಶ ಒಳ್ಳೆಯದೇ. ಆದರೆ ಖದೀಮ, ದಗಾಕೋರ, ಕಳ್ಳ, ಸುಳ್ಳ, ಮೋಸಗಾರ, ನಾಲಾಯಕ್, ವಂಚಕ, ಅಯೋಗ್ಯ, ಅಪರಾಧಿಗಳ ಪಟ್ಟಿಗೆ ಅನಕ್ಷರಸ್ಥರನ್ನು ಯಾಕೆ ಸೇರಿಸಿದರೋ? ಕೇವಲ ‘ಅಕ್ಷರ ಗೊತ್ತಿಲ್ಲ’ ಎಂಬ ಮಾತ್ರಕ್ಕೆ ವ್ಯಕ್ತಿಯೊಬ್ಬನ ಯೋಗ್ಯತೆ ಕಡಿಮೆಯಾದೀತೇ? ಯಾವ್ಯಾವುದೋ ಕಾರಣಕ್ಕೆ ಹಳ್ಳಿಗಾಡಿನಲ್ಲಿ ಈಗಲೂ ಒಂದಕ್ಷರ ಕೂಡ ಕಲಿಯದವರು ಇದ್ದಾರೆ. ಅಂಥವರು ಏನಾದರೂ ಸಾಧನೆ ಮಾಡಿದರೆ ಪುರಸ್ಕಾರ ದಕ್ಕಬಾರದೇ? (ನಕಲಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕಾರ ಬೇಡ ಬಿಡಿ!)
‘ದೇಶ ಹಾಳಾಗಿದ್ದು ಬಹುತೇಕ ಅಕ್ಷರ ಕಲಿತವರಿಂದಲೇ ಹೊರತು ಅನಕ್ಷರಸ್ಥರಿಂದ ಅಲ್ಲ. ಅನಕ್ಷರಸ್ಥರಿಗೆ ಮಾನ- ಮರ್ಯಾದೆ, ಹಿರಿಯರು, ದೈವ, ಸಮಾಜದ ಹೆದರಿಕೆ ಇರುತ್ತದೆ’ ಎಂದು ಹಿರಿಯರೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ. ಇದು ಸಾರ್ವತ್ರಿಕ ಅಂತೇನೂ ಪರಿಗಣಿಸಬೇಕಿಲ್ಲ. ನಮ್ಮ ಸುತ್ತಲಿನ ಬೆಳವಣಿಗೆ ಗಮನಿಸುತ್ತಿದ್ದರೆ ಹೆಚ್ಚಿನಂಶ ಸರಿ ಅನಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.