ADVERTISEMENT

ಕಾರ್ಯಕರ್ತೆಯರ ಹುದ್ದೆ ಭರ್ತಿ ಮಾಡಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 19:30 IST
Last Updated 18 ಜೂನ್ 2021, 19:30 IST

ಕಳೆದೊಂದು ದಶಕದಿಂದ ಅತ್ಯಂತ ಕಡಿಮೆ ಸಂಭಾವನೆ ಮತ್ತು ಸೌಲಭ್ಯ ಪಡೆಯುತ್ತಿದ್ದರೂ ಪ್ರತಿಕೂಲ ಸಂದರ್ಭ, ಸನ್ನಿವೇಶಗಳಲ್ಲಿ ಕೂಡ ವಿಕೇಂದ್ರೀಕೃತ ವ್ಯವಸ್ಥೆಯ ತಳಮಟ್ಟಕ್ಕೆ ಆರೋಗ್ಯಸೇವೆಯನ್ನು ತಲುಪಿಸುತ್ತಿರುವವರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು. ಆದರೆ ಜನಸಂಖ್ಯೆಗೆ ಅನುಗುಣವಾಗಿ ಇವರ ಹುದ್ದೆಗಳನ್ನು ಭರ್ತಿಗೊಳಿಸ ದಿರುವುದು, ಜನರನ್ನು ಆರೋಗ್ಯದ ಹಕ್ಕಿನಿಂದ ವಂಚಿತಗೊಳಿಸುವಂಥದ್ದಾಗಿದೆ.

ಸದ್ಯ ರಾಜ್ಯದಲ್ಲಿ 65,911 ಅಂಗನವಾಡಿ ಕಾರ್ಯಕರ್ತೆಯರು, 62,580 ಸಹಾಯಕಿಯರು, 42,000 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಕುರಿತಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ರಾಜ್ಯದಲ್ಲಿ 1,488 ಅಂಗನವಾಡಿ ಕಾರ್ಯಕರ್ತೆಯರು ಮತ್ತು 2,811 ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು ಅಪೌಷ್ಟಿಕತೆ ನಿವಾರಣೆ ಹಾಗೂ ನಿರ್ವಹಣೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ; ಹೀಗಾಗಿ, ತಕ್ಷಣವೇ ಈ ಹುದ್ದೆಗಳನ್ನು ಭರ್ತಿ ಮಾಡಿಸಬೇಕೆಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು ಪೀಠಕ್ಕೆ ಸಲಹೆ ನೀಡಿದೆ. ಇದು ಸ್ವಾಗತಾರ್ಹವಾಗಿದ್ದು, ತಕ್ಷಣವೇ ಅನುಷ್ಠಾನವಾಗಬೇಕು. ಇದೇ ರೀತಿ, ಜನಸಂಖ್ಯೆ ಆಧಾರಿತವಾಗಿ ಸಾವಿರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇವೆ. ಇವನ್ನೂ ತಕ್ಷಣವೇ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ತನ್ಮೂಲಕ ಗ್ರಾಮೀಣ ಮತ್ತು ವ್ಯವಸ್ಥೆಯ ತಳಮಟ್ಟಕ್ಕೆ ಆರೋಗ್ಯ ಸೌಲಭ್ಯವನ್ನು ಖಾತರಿ ಗೊಳಿಸಬೇಕು.

ರೂಪ ಹಾಸನ, ಹಾಸನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.