ಯಶ್ ಅಭಿನಯದಬಹು ನಿರೀಕ್ಷಿತ ‘ಕೆ.ಜಿ.ಎಫ್- 2’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಅದರಲ್ಲಿ ಯಶ್ ಸಿಗರೇಟು ಸೇದುವ ದೃಶ್ಯ ಇರುವುದನ್ನು ಖಂಡಿಸಿರುವ ರಾಜ್ಯ ಆರೋಗ್ಯ ಇಲಾಖೆಯು ಯಶ್ ಅವರಿಗೆ ನೋಟಿಸ್ ನೀಡಿದೆ. ಉದ್ದೇಶವೇನೋ ಒಳ್ಳೆಯದೆ. ಆದರೆ ಇತ್ತೀಚೆಗೆ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಸಿಗರೇಟ್ ಸೇದುವುದು, ಮದ್ಯ ಸೇವನೆ ಮಾಡುವುದು, ಮಚ್ಚು-ಲಾಂಗ್ ಹಿಡಿದು ಹೊಡೆದಾಡುವ ದೃಶ್ಯಗಳು ಸಾಮಾನ್ಯವಾಗಿವೆ.
ಹಿಂದಿನ ಕಾಲದ ಚಲನಚಿತ್ರಗಳು ಜನರ ಜೀವನವನ್ನೇ ಬದಲಾಯಿಸುವಷ್ಟು ಪರಿಣಾಮಕಾರಿಯಾಗಿ ಇರುತ್ತಿದ್ದವು. ಆದರೆ ಈಗಿನ ಚಿತ್ರಗಳಲ್ಲಿ ಅಪರಾಧ ಕೃತ್ಯಗಳನ್ನು ಅತಿಯಾಗಿ ವಿಜೃಂಭಿಸಿ ತೋರಿಸಲಾಗುತ್ತಿದೆ. ಇದು ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಅಪರಾಧ ಕೃತ್ಯಗಳನ್ನು ಮಾಡಲು ಪ್ರೋತ್ಸಾಹಿಸಿದಂತೆ ಆಗುತ್ತಿದೆ. ಇದರ ಅರಿವಿದ್ದೂ ಅಂತಹ ಚಿತ್ರಗಳ ಬಿಡುಗಡೆಗೆ ಪ್ರಮಾಣಪತ್ರ ದೊರೆಯುತ್ತಿದೆ ಎಂದರೆ ಸಮಾಜದ ಸ್ವಾಸ್ಥ್ಯಕ್ಕಿಂತ ‘ವಾಣಿಜ್ಯ’ ದೃಷ್ಟಿಯೇ ಪ್ರಮುಖವೆಂದು ಸಂಬಂಧಪಟ್ಟವರು ನಂಬಿರುವಂತಿದೆ. ಸಿನಿಮಾ ಕೋಟ್ಯಂತರ ಜನರ ಮೇಲೆ ನೇರ ಪರಿಣಾಮ ಬೀರುವುದರಿಂದ ನಿರ್ದೇಶಕರು ಮತ್ತು ನಿರ್ಮಾಪಕರು ಕೇವಲ ವಾಣಿಜ್ಯ ದೃಷ್ಟಿಯಿಂದ ಸಿನಿಮಾ ಮಾಡದೆ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಹ ಸಿನಿಮಾಗಳನ್ನು ನಿರ್ಮಿಸಲು ಮುಂದಾಗಬೇಕು.
- ರಾಜು ಬಿ. ಲಕ್ಕಂಪುರ,ಜಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.