ADVERTISEMENT

ಬಡ ಮಕ್ಕಳ ‘ಡಾಕ್ಟರ್‌’ ಕನಸಿಗೆ ನೀರೆರೆಯಿರಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಏಪ್ರಿಲ್ 2019, 16:31 IST
Last Updated 30 ಏಪ್ರಿಲ್ 2019, 16:31 IST

ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಅನೇಕ ಪೋಷಕರು ಪಿಯು ದಾಖಲಾತಿಗೆ ಖಾಸಗಿ ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಕೆಲವರಂತೂ ಕಾಲೇಜಿನವರು ಕೇಳಿದಷ್ಟು ಹಣ ತೆತ್ತು ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಪ್ರತಿಷ್ಠಿತ ಕಾಲೇಜುಗಳಲ್ಲಿ ಮಕ್ಕಳನ್ನು ಓದಿಸಬೇಕೆಂಬ ಪೋಷಕರ ಅತಿಯಾಸೆಯನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಕಾಲೇಜುಗಳು, ಹೆಚ್ಚಿನ ಶುಲ್ಕ ಪಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ವಿಜ್ಞಾನ ಓದುವ ಇಚ್ಛೆಯಿದ್ದರೂ ಹಣ ಕಟ್ಟಲಾಗದ ಬಡವರು ಮಾತ್ರ ಸರ್ಕಾರಿ ಕಾಲೇಜು ಸೇರುತ್ತಿದ್ದಾರೆ.

ಅಂತಹವರಿಗೆ ಎಂಜಿನಿಯರಿಂಗ್, ವೈದ್ಯಕೀಯ ಪ್ರವೇಶಾತಿಗೆ ಸಂಬಂಧಿಸಿದ ಸಿಇಟಿ, ನೀಟ್ ತರಬೇತಿಯು ಖಾಸಗಿಯವರಂತೆ ವರ್ಷವಿಡೀ ಸಿಗುವುದಿಲ್ಲ. ಆದರೆ ಖಾಸಗಿ ಕಾಲೇಜುಗಳಲ್ಲಿ ವರ್ಷದ ಆರಂಭದಿಂದಲೂ ಈ ಪರೀಕ್ಷೆಗಳಿಗೆ ತರಬೇತಿ ಸಿಗುತ್ತದೆ. ಒಂದೊಮ್ಮೆ ಸರ್ಕಾರಿ ಕಾಲೇಜಿನ ಮಕ್ಕಳಿಗೂ ಈ ಪರೀಕ್ಷೆಗಳಿಗೆ ತರಬೇತಿ ಬೇಕಾದಲ್ಲಿ ದ್ವಿತೀಯ ಪಿಯು ಪರೀಕ್ಷೆ ಮುಗಿದ ನಂತರ, ಖಾಸಗಿ ಟ್ಯುಟೋರಿಯಲ್‌ನವರು ನಡೆಸುವ ಕೋಚಿಂಗ್ ಕೇಂದ್ರಕ್ಕೆ ಹೋಗಬೇಕು. ಅಲ್ಲಿ ಒಂದೆರಡು ತಿಂಗಳಿಗೆ ₹ 30 ಸಾವಿರದಿಂದ ₹ 50 ಸಾವಿರ ತೆರಬೇಕು. ಒಂದೊಮ್ಮೆ ಆರ್ಥಿಕ ಸಂಕಷ್ಟದಿಂದ ಅಲ್ಲಿಗೂ ಹೋಗಲು ಸಾಧ್ಯವಾಗದಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತರಬೇತಿ ಪಡೆದವರಿಗೆ ಸ್ಪರ್ಧೆ ಒಡ್ಡಿ ವೈದ್ಯಕೀಯ ಸೀಟು ಪಡೆಯುವುದು ಕ್ಲಿಷ್ಟವೆನಿಸುತ್ತದೆ. ಆದ್ದರಿಂದ, ಸರ್ಕಾರಿ ಕಾಲೇಜುಗಳಲ್ಲೂ ಸಿಇಟಿ, ನೀಟ್‌ಗೆ ತರಬೇತಿ ಕೊಡುವ ವ್ಯವಸ್ಥೆಯಾಗಲಿ ಅಥವಾ ಸರ್ಕಾರವೇ ಇಂತಹ ಮಕ್ಕಳಿಗೆ ಉಚಿತ ಕೋಚಿಂಗ್ ಕೊಡುವ ವ್ಯವಸ್ಥೆ ಮಾಡಲಿ. ಈ ಮೂಲಕ, ವೈದ್ಯರಾಗಬೇಕೆಂಬ ಬಡ ಪ್ರತಿಭಾವಂತ ಮಕ್ಕಳ ಆಸೆ ಈಡೇರಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT