ಮಹಾರಾಷ್ಟ್ರದ ಭಂಡಾರ ನಗರದಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿದುರಂತದಲ್ಲಿ 10 ನವಜಾತ ಶಿಶುಗಳು ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ. ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತಾ ಸಾಧನಗಳು ಇಲ್ಲದಿದ್ದುದು, ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ ವರ್ಷವೇ ಕಳೆದರೂ ಪ್ರಯೋಜನ ಆಗದಿದ್ದುದು, ಕಳಪೆ ಕಾಮಗಾರಿ, ದೋಷಪೂರಿತ ಕರೆಂಟ್ ವೈರಿಂಗ್ ಮತ್ತಿತರ ಲೋಪಗಳನ್ನು ಗಮನಿಸದೇ ಪಾಲಿಕೆ ಅಧಿಕಾರಿಗಳು ಆಸ್ಪತ್ರೆಗೆ ಪರವಾನಗಿ ನೀಡಿರುವುದು ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಕಳೆದ ದಶಕದಲ್ಲಿ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಹಲವಾರು ಅಗ್ನಿದುರಂತಗಳು ನಡೆದರೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಎಲ್ಲ ಆಸ್ಪತ್ರೆಗಳಲ್ಲೂ ಅಗತ್ಯ ಅಗ್ನಿಶಾಮಕ ಉಪಕರಣಗಳ ವ್ಯವಸ್ಥೆ ಮಾಡಬೇಕು. ಅಗ್ನಿ ಅವಘಡದ ನಿರ್ವಹಣೆಯ ಬಗ್ಗೆ ವರ್ಷಕ್ಕೆ ಒಮ್ಮೆಯಾದರೂ ಅಣಕು ಪ್ರದರ್ಶನ ಏರ್ಪಡಿಸಬೇಕು. ಮಕ್ಕಳ ಜೀವಕ್ಕೆ ಬೆಲೆ ಕಟ್ಟಲಾಗದು. ಎಷ್ಟೇ ಪರಿಹಾರದ ಹಣ ನೀಡಿದರೂ ಪಾಲಕರ ನೋವು ಶಮನ ಮಾಡಲು ಸಾಧ್ಯವಿಲ್ಲ. ಇಂತಹ ದಾರುಣ ಘಟನೆಗಳು ಮರುಕಳಿಸದಂತೆ ಸುರಕ್ಷಿತ ಕ್ರಮಗಳನ್ನು ಮತ್ತಷ್ಟು ಬಲಪಡಿಸಬೇಕು.
– ಪಂಪಾಪತಿ ಹಿರೇಮಠ,ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.