ಬೆಳಗಾವಿ ಜಿಲ್ಲೆಯ ಹಲವಾರು ಗ್ರಾಮೀಣ ರಸ್ತೆಗಳ ಸ್ಥಿತಿ ಅಧೋಗತಿಗೆ ಇಳಿದಿದೆ. ಚೆನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನೇಸರಗಿ- ಮಲ್ಲಾಪೂರದಿಂದ ಗೋಕಾಕ ಗಡಿ ಭಾಗದವರೆಗೆ ಹಾಗೂ ಬೈಲಹೊಂಗಲ ಮತಕ್ಷೇತ್ರದ ಮುರಗೋಡದಿಂದ ಸವದತ್ತಿ ಮತಕ್ಷೇತ್ರದ ತಲ್ಲೂರು ಗ್ರಾಮದವರೆಗಿನ ರಸ್ತೆಗಳು ತೀರಾ ಹದಗೆಟ್ಟಿವೆ. ಇಲ್ಲಿ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಮತ್ತೊಂದೆಡೆ ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪೂರ ಗ್ರಾಮಕ್ಕೆ ಅಂಟಿಕೊಂಡಿರುವ ಮಾರ್ಕಂಡೇಯ ನದಿಯ ಸೇತುವೆ ತೀರಾ ಅಪಾಯಕಾರಿಯಾಗಿದೆ. ತಡೆಗೋಡೆ ಇಲ್ಲದ ಕಾರಣ, ಆಯ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ. ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಶೀಘ್ರ ಆಗಬೇಕಾಗಿದೆ.
ಮುರಗೋಡದಿಂದ ತಲ್ಲೂರುವರೆಗಿನ ರಸ್ತೆ ಕೂಡಾ ತಗ್ಗು-ದಿನ್ನೆಗಳಿಂದ ಆವೃತವಾಗಿದೆ. ರಸ್ತೆಗಳ ನಿರ್ವಹಣೆಗೆ ಮೀಸಲಿಟ್ಟ ಅನುದಾನವು ಸರಿಯಾಗಿ ವಿನಿಯೋಗವಾಗದೇ ಇರುವುದು ದುರದೃಷ್ಟಕರ. ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ವಾಹನ ಸವಾರರ ಸಂಕಷ್ಟ ಬಗೆಹರಿಸಬೇಕು.
-ಮಹಾಂತೇಶ ರಾಜಗೋಳಿ,ಬೈಲಹೊಂಗಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.