ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಶೇ 50ರಷ್ಟು ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿರುವ ಸರ್ಕಾರದ ಕ್ರಮ ಗೊಂದಲಮಯವಾಗಿದೆ. ಕಾರ್ಯಭಾರಕ್ಕೆ ಅನುಗುಣವಾಗಿ ಉಪನ್ಯಾಸಕರ ಸಂಖ್ಯೆಯನ್ನು ಕಡಿಮೆ ಮಾಡಬೇಕು, ಶೇ 50ರಷ್ಟು ಉಪನ್ಯಾಸಕರನ್ನು ಮಾತ್ರ ಮುಂದುವರಿಸಬೇಕು ಎಂಬ ನಿರ್ಧಾರವು ಅವೈಜ್ಞಾನಿಕವಾಗಿದೆ.
ಇದ್ದಕ್ಕಿದ್ದ ಹಾಗೆ ಶೇ 50ರಷ್ಟು ಕಾರ್ಯಭಾರ ಹೇಗೆ ಕಡಿಮೆಯಾಗುತ್ತದೆ? ಕೆಲವು ಸೆಮಿಸ್ಟರ್ಗಳಲ್ಲಿ ಐಚ್ಛಿಕ ವಿಷಯಗಳು ಕಡಿಮೆಯಾದರೂ ಶೇ 50ರಷ್ಟು ಕಾರ್ಯಭಾರ ಕಡಿಮೆಯಾಗುವುದಿಲ್ಲ. ಅಷ್ಟಕ್ಕೂಕಾರ್ಯಭಾರ ಇಲ್ಲದೆ ಅತಿಥಿ ಉಪನ್ಯಾಸಕರನ್ನು ಯಾವ ಪ್ರಾಂಶುಪಾಲರೂ ನೇಮಿಸಿಕೊಳ್ಳುವುದಿಲ್ಲ. ಬಹುತೇಕ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದ್ದು, ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದ್ದಾರೆ. ಕಾರ್ಯಭಾರ ಇಲ್ಲದಿದ್ದರೆ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದವರು, ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದವರು ಅಥವಾ ಜ್ಯೇಷ್ಠತೆ ಇರುವವರು ಯಾರೇ ಇರಲಿ ಸೇವೆಯಿಂದ ಹೊರ ಬೀಳುತ್ತಾರೆ. ಸದ್ಯ ಎಲ್ಲಾ ತರಗತಿಗಳಿಗೂ ಅನುಮತಿ ನೀಡಿ, ಉಪನ್ಯಾಸಕರನ್ನು ನೀಡದಿದ್ದರೆ ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಯಾರು? ಆದ್ದರಿಂದ ಸರ್ಕಾರವು ವಾಸ್ತವ ಸ್ಥಿತಿಯನ್ನು ಅರ್ಥೈಸಿಕೊಂಡು ಅಗತ್ಯಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಮುಂದುವರಿಸಲಿ.
ಅಶೋಕ ಓಜಿನಹಳ್ಳಿ, ಕೊಪ್ಪಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.