ಕಲಬುರ್ಗಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಿ ಪಟ್ಟ ಕಟ್ಟುವ ಬದಲು, ಇಂಗ್ಲಿಷನ್ನು ದ್ವೇಷಿಸಿ ಹೊರಕ್ಕೆ ಹಾಕುವ ಹುನ್ನಾರವೇ ಕಾಣುತ್ತಿದೆ. ಹಾಗಾದರೆ ಒಂದನ್ನು ಪ್ರೀತಿಸಬೇಕಾದರೆ ಮತ್ತೊಂದನ್ನು ದ್ವೇಷಿಸಬೇಕೇ? ಅನೇಕರು ಹೆಚ್ಚಿನ ಭಾಷೆಗಳಲ್ಲಿ ತಜ್ಞರಾಗಿ, ವಿದ್ವಾಂಸರಾಗಿ ನಮಗೆ ಮಾದರಿಯಾಗಿಲ್ಲವೇ? ಕೆಲವರು ಕನ್ನಡವನ್ನೂ ಜೀರ್ಣಿಸಿಕೊಳ್ಳದೆ, ಇಂಗ್ಲಿಷ್ ಅನ್ನೂ ಕಲಿಯದೆ ವೃತ್ತಿಯಲ್ಲಿ ಕೆಳ ಮಟ್ಟದಲ್ಲೇ ನರಳುತ್ತಿರುವುದು ಕಾಣುತ್ತಿಲ್ಲವೇ? ಚೀನೀಯರು, ಜಪಾನೀಯರು, ಇಸ್ರೇಲಿಗರು ಕೂಡ ತಮ್ಮ ಭಾಷೆಯ ಜೊತೆಗೆ ಇಂಗ್ಲಿಷ್ನಲ್ಲೂ ಪ್ರೌಢಿಮೆ ಪಡೆಯುತ್ತಿಲ್ಲವೇ?
ನಮ್ಮಲ್ಲಿ ಅಧಿಕಾರಸ್ಥ ರಾಜಕಾರಣಿಗಳಲ್ಲಿ ಎಷ್ಟು ಮಂದಿಗೆ ಭಾಷೆ ಮೇಲೆ ಹಿಡಿತ ಇದೆ? ಇಂಗ್ಲಿಷ್ ಇರಲಿ,ಕನ್ನಡದಲ್ಲಿ ನೆಟ್ಟಗೆ ಎಷ್ಟು ಮಂದಿ ಮಾತಾಡಬಲ್ಲರು? ನಮ್ಮ ಅನೇಕ ಕನ್ನಡ ವಿದ್ವಾಂಸರು ಇಂಗ್ಲಿಷ್ ಭಾಷೆಯಲ್ಲೂ ಪ್ರಭುತ್ವ ಪಡೆದಿದ್ದಾರೆ. ಹೀಗಿರುವಾಗ, ಇಂಗ್ಲಿಷ್ ಭಾಷೆ ಕಲಿಯುವುದು ಕಷ್ಟ, ಮಾತೃಭಾಷೆ ಎಲ್ಲದಕ್ಕೂ ಪರಮೌಷಧ ಎನ್ನುವುದು ಹೇಗೆ?
ಡಿ.ವಿ.ಗುಂಡಪ್ಪ, ಯು.ಆರ್.ಅನಂತಮೂರ್ತಿ, ಪ್ರೊ. ಸಿ.ಡಿ.ನರಸಿಂಹಯ್ಯ ಮುಂತಾದವರು ಕನ್ನಡಿಗರಾಗಿದ್ದೂ ಇಂಗ್ಲಿಷಿನಲ್ಲಿ ಪ್ರೌಢಿಮೆ ಪಡೆದಿದ್ದರು. ಮಾತೃಭಾಷೆ ಕನ್ನಡವಾಗಿದ್ದರೂ ಕನ್ನಡದಲ್ಲಿಯೇ ಸರಿಯಾಗಿ ಮಾತನಾಡಲಾರದವರ ಬಗ್ಗೆ, ಕನ್ನಡಿಗರಾಗಿದ್ದೂ ಕನ್ನಡ ಭಾಷೆಯನ್ನೇ ಮಕ್ಕಳಿಗೆ ಸರಿಯಾಗಿ ಹೇಳಿಕೊಡಲಾರದಂತಹ ಉಪಾಧ್ಯಾಯರ ಪ್ರೌಢಿಮೆಯ ಕೊರತೆ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಇಂಗ್ಲಿಷ್ ಅನ್ನೇ ಗುರಿಯಾಗಿಟ್ಟು ದ್ವೇಷಿಸುವುದು ಸರಿಯಲ್ಲ.
–ಸ್ವಾಮಿ ಕೇಶವ್ ಜಿ.,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.