ನಮ್ಮ ಜನಪ್ರತಿನಿಧಿಗಳು ಅನಾರೋಗ್ಯಕ್ಕೆ ಒಳಗಾದಾಗ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ವಿರಳಾತಿ ವಿರಳ.
ಸಂಸದರು, ಶಾಸಕರು (ಮಾಜಿಗಳು ಸಹ) ಚಿಕಿತ್ಸೆಗಾಗಿ ಸಿಂಗಪುರ, ಹಾಂಕಾಂಗ್ನತ್ತ ಮುಖಮಾಡುತ್ತಾರೆ. ಇವರ ಆರೋಗ್ಯ ವೆಚ್ಚವನ್ನು ಸರ್ಕಾರ ಭರಿಸುತ್ತದೆ.
ಜನರ ತೆರಿಗೆಯ ಹಣ ಹೇಗೆಲ್ಲ ಪೋಲಾಗುತ್ತದೆ ಎಂಬುದಕ್ಕೆ ಇದೂ ನಿದರ್ಶನ. ನಮ್ಮ ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇದೆ. ಪ್ರತಿ ಬಜೆಟ್ನಲ್ಲೂ ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತೆಗೆದಿರಿಸಲಾಗುತ್ತದೆ. ‘ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದ್ದೇವೆ, ಒಳ್ಳೆಯ ಆರೋಗ್ಯ ಸೇವೆ ನೀಡುತ್ತಿದ್ದೇವೆ...’ ಎಂದೆಲ್ಲ ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳು ಇವೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲವೇಕೆ?
ಸಾರ್ವಜನಿಕರ ತೆರಿಗೆ ಹಣದಿಂದ ರೂಪಿಸಿದ ವ್ಯವಸ್ಥೆಯಲ್ಲಿ ಜನರ ಆರೋಗ್ಯ ಸುಧಾರಿಸುತ್ತಿಲ್ಲ ಎಂದಮೇಲೆ, ಜನರ ತೆರಿಗೆ ಹಣದಿಂದ ಸಂಸದರು, ಶಾಸಕರ ಆರೋಗ್ಯ ವೆಚ್ಚ ಯಾಕೆ ಭರಿಸಬೇಕು? ಆದ್ದರಿಂದ ಸಂಸದರು, ಶಾಸಕ
ರಿಗೆ ವಿದೇಶಗಳಲ್ಲಿ ಚಿಕಿತ್ಸೆ ಕೊಡಿಸಲು ಹಣ ಕೊಡುವು
ದನ್ನು ಕೂಡಲೇ ರದ್ದುಗೊಳಿಸಬೇಕು. ಮಾಜಿ ಸಂಸದರು, ಶಾಸಕರಿಗೆ ಕೊಡುವ ಗೌರವಧನವೂ ರದ್ದಾಗಬೇಕು. ಜನರ ತೆರಿಗೆಯ ಹಣ ಪೋಲಾಗುವುದನ್ನು ತಪ್ಪಿಸಬೇಕು.
ಎಸ್. ಸುಂದರ್ ಕಲಿವೀರ್,ಅಲ್ಕೆರೆ ಅಗ್ರಹಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.