ADVERTISEMENT

ಮಾತಿನಲ್ಲಿ ವ್ಯಂಗ್ಯ, ಚೇತೋಹಾರಿ ಹಾಸ್ಯಪ್ರಜ್ಞೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 19:31 IST
Last Updated 13 ಜೂನ್ 2021, 19:31 IST

ಡಾ. ಸಿದ್ಧಲಿಂಗಯ್ಯ ಅತ್ಯಂತ ವೈವಿಧ್ಯಮಯ ಬದುಕನ್ನು ಅನುಭವಿಸಿದವರು. ಕಳೆದ 48 ವರ್ಷಗಳ ಆತನ ಒಡನಾಟ ಸ್ಮರಣೀಯವಾದದ್ದು. ಅವರ ‘ಹೊಲೆಮಾದಿಗರ ಹಾಡು’ ಸಂಕಲನದ ಎಲ್ಲಾ ಕವಿತೆಗಳನ್ನು ‘ಶೂದ್ರ’ ‍ಪತ್ರಿಕೆ ಯಲ್ಲಿ ಪ್ರಕಟಿಸಿದೆ. ಅದು ಪುಸ್ತಕ ರೂಪದಲ್ಲಿ ಬರುವುದಕ್ಕೆ ಸಂಬಂಧಿಸಿದಂತೆ ಕಿ.ರಂ.ನಾಗರಾಜ್ ಅವರ ಮನೆಯಲ್ಲಿ ನಡೆದ ಚರ್ಚೆಯನ್ನು ಮರೆಯಲು ಸಾಧ್ಯವಿಲ್ಲ. ಆ ಸಂಕಲನ ಕರ್ನಾಟಕದಲ್ಲಿ ದಲಿತ ಚಳವಳಿಗೆ ಸಂಬಂಧಿಸಿದಂತೆ ಪರೋಕ್ಷವಾಗಿ ಮ್ಯಾನಿಫೆಸ್ಟ್ ರೀತಿಯಲ್ಲಿ ಪ್ರಭಾವ ಬೀರಿತು. ಹಾಗೆಯೇ ಬೂಸಾ ಚಳವಳಿಗೆ ಸಂಬಂಧಿಸಿದಂತೆ ನಾವೆಲ್ಲರೂ ಒಟ್ಟಿಗೆ ಅದರಲ್ಲಿ ತೊಡಗಿಸಿಕೊಂಡಿದ್ದೆವು.

ತುರ್ತುಪರಿಸ್ಥಿತಿ ವಿರೋಧಿಸಿ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ್ ಮತ್ತು ನಾನು ಭಾಗವಹಿಸಿದ್ದೆವು. ಅದರ ಉದ್ಘಾಟನೆ ನಮ್ಮ ಶಿವರಾಮ ಕಾರಂತರು, ಅಧ್ಯಕ್ಷತೆ
ಇ.ಎಂ.ಎಸ್.ನಂಬೂದಿರಿಪಾಡ್‌ ಅವರದ್ದು. ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟಿಗೆ ಸಂಬಂಧಿಸಿದ್ದೂ ಸೇರಿದಂತೆ ಎಷ್ಟೊಂದು ಶ್ರೀಮಂತ ನೆನಪುಗಳಿಗೆ ಸಿದ್ಧಲಿಂಗಯ್ಯ ಕಾರಣಕರ್ತರಾದರು. ಆತ ನಮ್ಮ ನಡುವಿನ ಅಪೂರ್ವ ಭಾಷಣಕಾರರಾಗಿದ್ದರು. ಅವರ ಮಾತಿನ ವ್ಯಂಗ್ಯ ಹಾಗೂ ಹಾಸ್ಯಪ್ರಜ್ಞೆ ಚೇತೋಹಾರಿಯಾಗಿರುತ್ತಿದ್ದವು. ಇಂತಹ ಮಹತ್ವದ ಗೆಳೆಯನಿಗೆ ಯಾವ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸುವುದು?⇒

- ಶೂದ್ರ ಶ್ರೀನಿವಾಸ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.