ಅಕ್ರಮ ಗಣಿಗಾರಿಕೆಯಿಂದ ಮಂಡ್ಯದ ಬೇಬಿ ಬೆಟ್ಟ ದಿನೇ ದಿನೇ ಕರಗುತ್ತಿದೆ, ಆದರೆ ಗಣಿ ಮಾಲೀಕರು ಉಳಿಸಿ ಕೊಂಡಿರುವ ರಾಜಧನ ಹಾಗೂ ದಂಡದ ಬಾಕಿ ಮೊತ್ತವು ಬೆಟ್ಟಕ್ಕಿಂತ ಎತ್ತರವಾಗಿ ಏರತೊಡಗಿರುವುದು (ಪ್ರ.ವಾ., ಜುಲೈ 12) ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯಕ್ಕೆ ನಿದರ್ಶನ. ಗಣಿಗಾರಿಕೆಯು ಜಿಲ್ಲಾಡಳಿತದ ಕಣ್ಣು ತಪ್ಪಿಸಿ ನಡೆಯಲು ಸಾಧ್ಯವಿಲ್ಲ. ಹಾಗೆಯೇ ಇದು ಒಂದೆರಡು ದಿನಗಳಲ್ಲಿ ನಡೆಯುವ ಚಟುವಟಿಕೆ ಕೂಡ ಅಲ್ಲ. ಜನಪ್ರತಿ ನಿಧಿಗಳು ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ಸರಿ ಯಾದ ಮಾಹಿತಿ ಒದಗಿಸಿ ತನಿಖೆಗೆ ಸಹಕರಿಸುವುದನ್ನು ಬಿಟ್ಟು, ಪರಸ್ಪರ ವೈಯಕ್ತಿಕ ಪ್ರತಿಷ್ಠೆಯ ಮಟ್ಟಕ್ಕೆ ವಿಷಯವನ್ನು ಬೆಳೆಸುವುದರಿಂದ ಮೂಲ ಆಶಯ ಮರೆಯಾಗುತ್ತದೆ.
ಅಕ್ರಮ ಗಣಿಗಾರಿಕೆಯಿಂದ ಗಣಿ ಮಾಲೀಕರು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ದಂಡದ ಹಣ ಉಳಿಸಿ ಕೊಂಡಿದ್ದಾರೆ ಎಂದರೆ ಇದರ ಅರ್ಥ ನಮ್ಮ ಆಡಳಿತವು ಅಕ್ರಮ ನಡೆಯುವವರೆಗೂ ಕಾದು ದಂಡಾಸ್ತ್ರ ಪ್ರಯೋಗ ಮಾಡಿದಂತೆ ಆಗುವುದಿಲ್ಲವೇ? ಪರಿಸರ ನಾಶಕ್ಕೆ ಕಾರಣ ವಾಗುವ ಇಂಥ ಕೃತ್ಯಗಳಿಗೆ ದಂಡ ಹಾಕುವ ಕ್ರಮದಿಂದ ಸರ್ಕಾರದ ಬೊಕ್ಕಸ ತುಂಬುತ್ತದೆಯೇ ವಿನಾ ನಾಶವಾದ ಪರಿಸರವನ್ನು ಪುನರುಜ್ಜೀವನಗೊಳಿಸುವುದು ಸಾಧ್ಯವಿಲ್ಲ. ಇದಕ್ಕೆ ನಿಜವಾಗಿ ದಂಡ ತೆರುವಂತಾಗುವುದು ಮುಂದಿನ ತಲೆಮಾರಿನ ಜನರ ಬದುಕು.
- ಡಾ. ಜಿ.ಬೈರೇಗೌಡ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.