ADVERTISEMENT

ಅಡಿಕೆ ಮಹತ್ವ: ಮನವರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 20:00 IST
Last Updated 16 ಜುಲೈ 2019, 20:00 IST

ಗುಜರಾತ್ ಸಂಸದರೊಬ್ಬರು ಸಂಸತ್ತಿನಲ್ಲಿ ‘ಅಡಿಕೆ ಬೆಳೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೇ?’ ಎಂದು ಕೇಳಿದ ಪ್ರಶ್ನೆಗೆ, ಕೇಂದ್ರ ಸಚಿವ ಅಶ್ವಿನಿಕುಮಾರ್ ಚೌಬೆ ಅವರು ‘ಹೌದು’ ಎಂದು ಉತ್ತರಿಸಿದ್ದಾರೆ. ಈ ಮೂಲಕ, ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ ಲಕ್ಷಾಂತರ ಜನರ ಮೂಲಕಸುಬಾದ ಅಡಿಕೆ ಬೆಳೆಯ ಬಗ್ಗೆ ಸಚಿವರು ನಕಾರಾತ್ಮಕ ಅಭಿಪ್ರಾಯ ಹೊರಹಾಕಿದ್ದಾರೆ.

ಅಡಿಕೆಯು ಕ್ಯಾನ್ಸರ್‌ಕಾರಕ ಹೌದೋ ಅಲ್ಲವೋ ಎಂಬ ಬಗ್ಗೆ ಬಹುಸಮಯದಿಂದ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, ಅಡಿಕೆ ಬೆಳೆಗಾರರ ಹಿತ ಕಾಯಬೇಕಾದ ಕರಾವಳಿ, ಮಲೆನಾಡು ಭಾಗದ ಸಂಸದರು ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಿಕೊಡುವಲ್ಲಿ ಎಡವಿದ್ದಾರೆ. ಇದರಿಂದ, ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಬೆನ್ನೆಲುಬಾಗಿರುವ ಅಡಿಕೆ ಬೆಳೆಯ ಮೇಲೆ ಮೊದಲಿನಿಂದಲೂ ತೂಗುಗತ್ತಿ ಇದೆ. ಸಾಂಪ್ರದಾಯಿಕ ಬೆಳೆಯಾದ ಅಡಿಕೆಯು ಭಾರತೀಯ ಧಾರ್ಮಿಕ ಆಚರಣೆಯಲ್ಲೂ ಮಹತ್ವ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕರಾವಳಿಗೆ ಭೇಟಿ ನೀಡಿದ್ದಾಗ ಅಡಿಕೆ ಬೆಳೆಯ ಬಗ್ಗೆ ಖುದ್ದು ಭರವಸೆಯ ಮಾತುಗಳನ್ನಾಡಿದ್ದರು. ಇದನ್ನು ಸಾಕಾರಗೊಳಿಸುವಲ್ಲಿ ಕರಾವಳಿ, ಮಲೆನಾಡು ಭಾಗದ ಸಂಸದರು ಒಗ್ಗಟ್ಟಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುವ ಅವಶ್ಯಕತೆ ಖಂಡಿತವಾಗಿಯೂ ಇದೆ.

- ಆದರ್ಶ್ ಶೆಟ್ಟಿ,ಉಪ್ಪಿನಂಗಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.