‘ಹಿರಿಯರ ಮನೆ’ ಎಂದು ಕರೆಯಲಾಗುವ ವಿಧಾನ ಪರಿಷತ್ನಲ್ಲಿ ಸದಸ್ಯರು ಮಂಗಳವಾರ ಒಬ್ಬರನ್ನೊಬ್ಬರು ಎಳೆದಾಡಿ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದು, ಕನ್ನಡಿಗರು ತಲೆ ತಗ್ಗಿಸುವಂತಹ ಸಂಗತಿ. ಇದೊಂದು ನಾಚಿಕೆಗೇಡಿನ ಬೆಳವಣಿಗೆ. ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಈ ಬಗೆಯಲ್ಲಿ ಘರ್ಷಣೆ ನಡೆದಿದ್ದು ವಿಧಾನಮಂಡಲದ ಇತಿಹಾಸದಲ್ಲಿ ಇದೇ ಮೊದಲು.
ಸಂಸದೀಯ ವ್ಯವಸ್ಥೆಯಲ್ಲಿ ಮೇಲ್ಮನೆ ಅತ್ಯವಶ್ಯಕವಾಗಿ ಇರಲೇಬೇಕೆಂದೇನಿಲ್ಲ. ನೇರ ಜನರಿಂದ ತಿರಸ್ಕೃತರಾದ ಕೆಲವರು ಜಾತಿಬಲ, ಧನಬಲ ಮತ್ತು ಭುಜಬಲದ ನೆರವಿನಿಂದ ಮೇಲ್ಮನೆಗೆ ಆಯ್ಕೆಯಾಗುತ್ತಿರುವುದೇ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ. ಚಿಂತಕರ ಚಾವಡಿ ಆಗಬೇಕಿದ್ದ ವಿಧಾನಪರಿಷತ್ ಕುಸ್ತಿ ಅಖಾಡವಾಗುತ್ತಿದೆ.
ಇಂಥವರಿಗೆ ಅಧಿಕಾರ ದೊರಕಿಸಿಕೊಡಲು ಜನರ ತೆರಿಗೆ ಹಣ ಖರ್ಚು ಮಾಡುವುದನ್ನು ತಡೆಯಲು ವಿಧಾನ ಪರಿಷತ್ ಅನ್ನು ರದ್ದು ಮಾಡುವುದೇ ಉತ್ತಮ. ಪರಿಷತ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ರಾಜ್ಯದ ಜನರಲ್ಲಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ನ್ಯಾಯಾಂಗದ ಮೊರೆ ಹೋಗುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಏನೇ ಇರಲಿ, ಮೇಲ್ಮನೆಗೆ ಅಂಟಿಕೊಂಡ ಕಪ್ಪುಮಸಿಯನ್ನು ಅಳಿಸಲಿಕ್ಕಾಗದು. ಅಡಿಕೆಗೆ ಹೊದ ಮಾನ ಆನೆ ಕೊಟ್ಟರೂ ಬಾರದು.
–ಪಂಪಾಪತಿ ಹಿರೇಮಠ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.