ADVERTISEMENT

ವಾಚಕರ ವಾಣಿ| ವಿದ್ಯುತ್‌ ದರ: ತಪ್ಪು ಸಂದೇಶ ಪ್ರಚಾರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 19:31 IST
Last Updated 30 ಮಾರ್ಚ್ 2022, 19:31 IST

ವಿದ್ಯುತ್ ಶುಲ್ಕಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಮೂರ್ನಾಲ್ಕು ವರ್ಷಗಳಿಂದಲೂ ತಪ್ಪು ಸಂದೇಶ ಹರಿದಾಡುತ್ತಿದೆ. ದೇವಾಲಯ, ಮಸೀದಿ ಮತ್ತು ಚರ್ಚ್‍ಗಳಿಗೆ ಪ್ರತ್ಯೇಕವಾದ ಪ್ರಮಾಣದಲ್ಲಿ ವಿದ್ಯುತ್‌ ದರವನ್ನು ಎಸ್ಕಾಂಗಳು (ವಿದ್ಯುತ್ ಸರಬರಾಜು ಕಂಪನಿಗಳು) ವಿಧಿಸುತ್ತಿದ್ದು, ದೇವಾಲಯಗಳಿಗೆ ಪ್ರತೀ ಯುನಿಟ್‍ಗೆ 800 ಪೈಸೆ, ಮಸೀದಿಗೆ 285 ಪೈಸೆ ಮತ್ತು ಚರ್ಚ್‍ಗಳಿಗೆ 285 ಪೈಸೆ ಎಂದು ಪ್ರಚಾರ ಮಾಡಲಾಗುತ್ತಿದೆ. ಯಾವುದೇ ಕಾಲದಲ್ಲಿಯೂ ಪೂಜಾ ಮಂದಿರಗಳಿಗಾಗಲಿ ಅಥವಾ ಧಾರ್ಮಿಕ ಮಂದಿರಗಳಿಗಾಗಲಿ ಧರ್ಮ ಅಥವಾ ಮತದ ಆಧಾರದ ಮೇಲೆ ವಿದ್ಯುತ್ ಶುಲ್ಕವನ್ನು ವಿಧಿಸಿರುವ ಇತಿಹಾಸವಿಲ್ಲ. ಇಂತಹ ಒಂದು ಪ್ರಸ್ತಾವವನ್ನು ಯಾವಾಗಲೂ ಎಸ್ಕಾಂ ಮಾಡಿಲ್ಲ ಮತ್ತು ಇದಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸಹ ಅವಕಾಶ ಕೊಟ್ಟಿಲ್ಲ. ಹೀಗಿರುವಾಗ ಜನರಿಗೆ ತಪ್ಪು ಸಂದೇಶ ನೀಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ಸಂದೇಶ ಅಥವಾ ಸುದ್ದಿಗಳನ್ನು ಪರಿಶೀಲಿಸಿ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಒಬ್ಬರು ಒಂದು ಸಂದೇಶವನ್ನು ಹರಿಯಬಿಟ್ಟರೆ ಅದು ಸರಿ ಇರುವುದು ಎಂಬ ಭಾವನೆಯಿಂದಲೇ ಅದನ್ನು ಒಬ್ಬರಿಂದೊಬ್ಬರಿಗೆ ತಿಳಿಸುವ ಪ್ರಯತ್ನವನ್ನು ಜನ ಮಾಡುತ್ತಾರೆ. ಸರಿಯಾಗಿ ತಿಳಿದುಕೊಳ್ಳದೆ ಇಂತಹ ಸುದ್ದಿ ಹಬ್ಬಿಸುವವರನ್ನು ಪತ್ತೆ ಹಚ್ಚಿ ಛೀಮಾರಿ ಹಾಕಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇನ್ನೂ ಇಂತಹ ಅನೇಕ ತಪ್ಪು ಸಂದೇಶಗಳಿಗೆ ಕಡಿವಾಣ ಬೀಳಬೇಕು.

ಕೆ.ವಿ.ಸೀತಾರಾಮಯ್ಯ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.