ಹೊಸ ವರ್ಷ ಆಚರಣೆಯ ನೆಪದಲ್ಲಿ ಕೆಲವರು ‘ನಾನು ದುಡಿಯುತ್ತೇನೆ, ನಾನು ಖರ್ಚುಮಾಡುತ್ತೇನೆ, ಯಾರ ಹಂಗೇನು?’ ಎಂಬಂತೆ ದುಪ್ಪಟ್ಟು ಹಣ ಕೊಟ್ಟು ಮೋಜು ಮಸ್ತಿಗಾಗಿ ಬೆಂಗಳೂರಿನಬಾರ್, ಕ್ಲಬ್ ಮತ್ತು ಹೋಟೆಲ್ ಗಳಿಗೆ ಹೋಗುತ್ತಾರೆ. ಇಂತಹ ಪಡ್ಡೆ ಹೈಕಳುಗಳ ಹಣದ ಪರ್ಸ್ ಕಂಡ ಬಾರ್ ಮಾಲೀಕರು ತರತರಹದ ರಂಗಿನಾಟ ಆಯೋಜಿಸಿ, ಒಂದು ತಿಂಗಳಲ್ಲಿ ಅವರಿಗೆ ಆಗುವ ವ್ಯಾಪಾರದ ಹಣವನ್ನು ಒಂದೇ ದಿನದಲ್ಲಿ ಬಾಚಿಕೊಳ್ಳುತ್ತಾರೆ. ಇದನ್ನು ಅರಿಯದ ಜನ ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ಬೆಂಗಳೂರಲ್ಲಿ ದುಡಿದ ಹಣವನ್ನು ಬೆಂಗಳೂರಲ್ಲಿಯೇ ವ್ಯಯ ಮಾಡುತ್ತಾರೆ. ಇತ್ತೀಚೆಗೆ ಈ ಕೆಟ್ಟ ಸಂಪ್ರದಾಯ ಎಲ್ಲ ಕಡೆಗೂ ವ್ಯಾಪಿಸುತ್ತಿದೆ.
ಹದಿಹರೆಯದ ಜೀವಗಳು ಕುಡಿಯದಿದ್ದರೆ, ಕುಣಿಯದಿದ್ದರೆ, ಕೂಗಾಡದಿದ್ದರೆ ಹೊಸ ವರ್ಷ ಬರುವುದಿಲ್ಲವೇ? ಹೊಸವರ್ಷವನ್ನು ಸ್ವಾಗತಿಸಲು ಹೋಟೆಲ್ಗಳಿಗೇ ಹೋಗಬೇಕೆ? ಅಷ್ಟಕ್ಕೂ ನಮ್ಮ ಭಾರತೀಯ ಪರಂಪರೆಯಂತೆ ಹೊಸ ವರ್ಷ ಬರುವುದು ಯುಗಾದಿಗೆ. ನಾವು ಜಾಗತೀಕರಣದ ವ್ಯಾಮೋಹದಲ್ಲಿ ನಮ್ಮ ನೆಲದ ಪದ್ಧತಿಗಳನ್ನು ಬದಿ ಗೊತ್ತುತ್ತಿದ್ದೇವೆ. ಈ ದಿಸೆಯಲ್ಲಿ ಎಚ್ಚೆತ್ತ ಸರ್ಕಾರ ರಾತ್ರಿ ಕರ್ಫ್ಯೂ ವಿಧಿಸಿದ್ದು ಸ್ವಾಗತಾರ್ಹ ನಡೆ.
ಗಣಪತಿ ನಾಯ್ಕ್,ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.