‘ಮಹಿಳೆಯರು ಸೀರೆ ಉಟ್ಟರೆ ಸುಂದರವಾಗಿ ಕಾಣಿಸುತ್ತಾರೆ, ಸಲ್ವಾರ್ ಕಮೀಜ್ ಧರಿಸಿದರೂ ಚೆನ್ನಾಗಿ ಕಾಣುತ್ತಾರೆ, ಏನೂ ಧರಿಸದಿದ್ದರೂ ಚೆಂದ ಕಾಣುತ್ತಾರೆ’ ಎನ್ನುವ ಯೋಗ ಗುರು ಬಾಬಾ ರಾಮದೇವ್ ಅವರ ಹೇಳಿಕೆ ಪ್ರಜ್ಞಾವಂತರನ್ನು ದಿಗಿಲುಗೊಳಿಸಿದೆ. ಇಂತಹ ನುಡಿಮುತ್ತುಗಳು ಕಾಲೇಜು ರೋಮಿಯೊಗಳಿಂದಲೋ ಪಡ್ಡೆ ಹುಡುಗರಿಂದಲೋ ಬಂದಿದ್ದರೆ ಅದನ್ನು ಹುಚ್ಚು ಕೋಡಿ ಮನಸ್ಸಿನ ಅಪ್ರಬುದ್ಧ ಪ್ರಲಾಪ ಎನ್ನಬಹುದಿತ್ತು. ಅಂತೆಯೇ ಅದನ್ನು ನಿರ್ಲಕ್ಷಿಸಬಹುದಿತ್ತು. ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ, ಆಳುವ ಪಕ್ಷಕ್ಕೆ ಅತಿ ಹತ್ತಿರ ಇರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿಯೊಬ್ಬರಿಂದ ಇಂತಹ ಮಾತುಗಳು ಬಂದಿವೆ. ಅವರು ಇದನ್ನು ಮಾತಿನ ಭರದಲ್ಲಿ ಹೇಳಿದ್ದು ಎನ್ನಬಹುದು ಅಥವಾ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎನ್ನಬಹುದು. ಅದರೆ, ‘ಮುತ್ತು ಒಡೆದರೆ ಮತ್ತು ಮಾತು ಆಡಿದರೆ ಮುಗಿಯಿತು’ ಎಂಬ ಮಾತಿನ ಅಡಿಯಲ್ಲಿ, ಇವರ ಈ ಹಗುರ ಮಾತು ಮಾಡಿದ ಹಾನಿ ಗಮನಾರ್ಹ ಎನ್ನಬಹುದು.
-ರಮಾನಂದ ಶರ್ಮಾ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.