ಕೆಲವು ಪ್ರಶಸ್ತಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಅನುದಾನದ ಕೊರತೆಯ ಕಾರಣಕ್ಕೆ ನಿಲ್ಲಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಲುವು ಖಂಡನೀಯ. ಪ್ರಾಧಿಕಾರದ ಯೋಜನೆಗಳಿಗೆ ಹಣ ತರುವ ತಾಕತ್ತು ಇಲ್ಲದಿದ್ದರೆ, ಅದರ ಹೊಣೆ ಹೊತ್ತವರು ತತ್ಕ್ಷಣ ಕುರ್ಚಿ ಬಿಟ್ಟು ಹೋಗಬೇಕು. ರಾಜ್ಯದ ಪ್ರಜ್ಞಾವಂತರು, ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳು ಪ್ರಾಧಿಕಾರದ ನಿಲುವನ್ನು, ಅದರ ‘ಹೇಡಿತನ’ವನ್ನು ಈಗಾಗಲೇ ಖಂಡಿಸಿ, ಪ್ರಾಧಿಕಾರ ಮುನ್ನಡೆಸಲು ಸಾಧ್ಯವಿಲ್ಲದಿದ್ದರೆ ಮುಚ್ಚಿಬಿಡಿ ಎಂದು ಎಚ್ಚರಿಸಿದ್ದಾರೆ.
ಪ್ರಾಧಿಕಾರಕ್ಕೆ ಈಗಲೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿ ಬಳಿ ಕಾಡಿಬೇಡಿಯಾದರೂ ಹಣ ತರಬೇಕು. ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ‘ನೌಕರರ ಸಂಬಳಕ್ಕಷ್ಟೇ ಹಣ ಇದೆ. ಎಲ್ಲಿಂದ ತರಲಿ ಪ್ರಶಸ್ತಿ, ವಿದ್ಯಾರ್ಥಿ ವೇತನಕ್ಕೆ ಹಣ?’ ಎಂದಿದ್ದಾರೆ. ಹಣ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಹೊರ ರಾಜ್ಯಗಳಲ್ಲಿ ಕನ್ನಡ ಎಂ.ಎ. ಓದುವ ವಿದ್ಯಾರ್ಥಿಗಳ ಹಿತ ಕಾಯ
ಬೇಕು. ಹೀಗಾಗಿ ತನ್ನ ನಿಲುವನ್ನು ಪ್ರಾಧಿಕಾರ ಬದಲಿಸಲಿ. ಇಲ್ಲವಾದರೆ ಕನ್ನಡಿಗರು ಪ್ರತಿಭಟಿಸ ಬೇಕಾಗುತ್ತದೆ.
ಈ ಯೋಜನೆ ನಿಂತರೆ ನಾಗಾಭರಣ ಮತ್ತವರ ತಂಡ ‘ಕನ್ನಡದ್ರೋಹಿ’ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ. ಜೊತೆಗೆ ಹೊರರಾಜ್ಯದ ಕನ್ನಡ ವಿಭಾಗಗಳಿಗೆ ವಿದ್ಯಾರ್ಥಿಗಳೇ ಬರುವುದಿಲ್ಲ. ಆಗ ಸಹಜವಾಗಿ ಕನ್ನಡ ವಿಭಾಗಗಳು ಸಾಯುತ್ತವೆ. ಒಮ್ಮೆ ಬಾಗಿಲು ಮುಚ್ಚಿದರೆ ಮತ್ತೆ ತೆರೆಯುವುದು ಸಾಧ್ಯವೇ ಇಲ್ಲ. ಈ ದುಷ್ಟ ಕೆಲಸ ಮಾಡಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂಬ ಅಪಖ್ಯಾತಿ ಬರುತ್ತದೆ. ಹಾಗಾಗದಂತೆ ಎಚ್ಚರ ವಹಿಸ ಬೇಕಾದದ್ದು ಪ್ರಾಧಿಕಾರದ ಕರ್ತವ್ಯ.
– ಆರ್.ಜಿ.ಹಳ್ಳಿ ನಾಗರಾಜ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.