ADVERTISEMENT

ಅಯೋಧ್ಯೆಯಲ್ಲ ‘ಸಾಕೇತ್‌’ ಹೆಸರು ಸರಿ

ಪ್ರವೀಣ್ ಎಸ್ ಶೆಟ್ಟಿ ಮಂಗಳೂರು
Published 14 ನವೆಂಬರ್ 2018, 20:15 IST
Last Updated 14 ನವೆಂಬರ್ 2018, 20:15 IST
ganesh
ganesh   

ಈಗಿನ ಗುಜರಾತ್ ರಾಜ್ಯದ ಮೂಲ ಹೆಸರು ‘ಗುರ್ಜರ್ ರಾಷ್ಟ್ರ’ ಆಗಿತ್ತು. ಅದು ಮುಸ್ಲಿಂ ನವಾಬರ ಆಡಳಿತ ಕಾಲದಲ್ಲಿ ಅಪಭ್ರಂಶಗೊಂಡು ಗುಜರಾತ್ ಆಯಿತು. ಗುರ್ಜರ್‌ರಾಷ್ಟ್ರ, ಸೌರಾಷ್ಟ್ರ ಮತ್ತು ಕಛ್ ಇವು ಗುರ್ಜರ ಸಮುದಾಯದವರು ವಾಸಿಸುತ್ತಿದ್ದ ಪ್ರದೇಶಗಳಾಗಿದ್ದವು. ಮುಸ್ಲಿಮರ ಆಡಳಿತ ಕಾಲದಲ್ಲಿ ಸೌರಾಷ್ಟ್ರ ಮತ್ತು ಕಛ್ ಪ್ರದೇಶ ಸಹಿತ ಆ ಎಲ್ಲಾ ಪ್ರದೇಶಕ್ಕೆ ಗುಜರಾತ್ ಎಂಬ ಹೆಸರು ಬಂತು. ಹಿಂದುತ್ವವಾದಿಗಳ ಕೆಂಗಣ್ಣು ಈ ‘ಗುಜರಾತ್’ ಎಂಬ ಮುಸ್ಲಿಂ ಹೆಸರಿನ ಮೇಲೆ ಯಾವಾಗ ಬೀಳುತ್ತೋ!?

‘ಅಯೋಧ್ಯೆಯ ಮೂಲ ಹೆಸರು ‘ಸಾಕೇತ್’ ಆಗಿತ್ತು ಮತ್ತು ಅದು ಕ್ರಿಸ್ತಪೂರ್ವದಲ್ಲಿಯೇ ಒಂದು ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು. ಕ್ರಿ.ಶ. ಒಂದನೇ ಶತಮಾನದಲ್ಲಿ ಶುಂಗ ವಂಶದ ಆಡಳಿತ ಕಾಲದಲ್ಲಿ ಸಾಕೇತ್ ಹೆಸರು ಬದಲಿಸಿ ಅಯೋಧ್ಯೆ ಮಾಡಲಾಯಿತು’ ಎನ್ನುತ್ತಾರೆ ಇತಿಹಾಸಕಾರರು. ಲಿಪಿಯೇ ಇರದಿದ್ದ ಮೌಖಿಕ ಭಾಷೆ ಮಾತ್ರ ಆಗಿದ್ದ ಸಂಸ್ಕೃತಕ್ಕೆ ದೇವನಾಗರಿ ಲಿಪಿ ಅಳವಡಿಸಿದ್ದೂ ಶುಂಗ ಅರಸರ ಕಾಲದಲ್ಲಿ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣ, ಮಹಾಭಾರತ ಬರೆದಿದ್ದೂ ಶುಂಗರ ಕಾಲದಲ್ಲಿ. ಅದಕ್ಕೆ ಮುಂಚೆಯೇ ಚಂದ್ರಗುಪ್ತ, ಅಶೋಕ ಮುಂತಾದ ಮೌರ್ಯ ಅರಸರ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಇತಿಹಾಸಕಾರರು ಸಾಕೇತ್ ನಗರದ ಹೆಸರು ಹಾಗೂ ಬ್ರಾಹ್ಮಿ ಲಿಪಿಯಲ್ಲಿದ್ದ ಪಾಲಿ ಮತ್ತು ಪ್ರಾಕೃತ ಭಾಷೆಗಳ ಬಗ್ಗೆ ಉಲ್ಲೇಖಿಸಿದ್ದಾರೆಯೇ ವಿನಾ ಸಂಸ್ಕೃತ ಭಾಷೆ ಹಾಗೂ ಅಯೋಧ್ಯೆ ನಗರದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇದರ ಅರ್ಥ ಕ್ರಿ.ಪೂ. ಎರಡನೇ ಶತಮಾನದಲ್ಲಿ ಅಲೆಕ್ಸಾಂಡರ್ ಭಾರತಕ್ಕೆ ಬಂದಿದ್ದಾಗ ಸಾಕೇತ್ ಎಂಬ ಬೌದ್ಧ ಶಿಕ್ಷಣ ಕೇಂದ್ರ ಇತ್ತು. ಆದರೆ ಅಯೋಧ್ಯೆ ಎಂಬ ಕಾಲ್ಪನಿಕ ಪವಿತ್ರ ನಗರದ ಹೆಸರು ಮತ್ತು ಸಂಸ್ಕೃತ ಭಾಷೆ ಪ್ರಚಲಿತವಾಗಿರಲಿಲ್ಲ. ಹಾಗಿರುವಾಗ ಅಯೋಧ್ಯೆಗೆ ಮೂಲ ಹೆಸರಾದ ಸಾಕೇತ್ ಎಂದು ಮರುನಾಮಕರಣ ಮಾಡುವುದು ಉಚಿತವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT