ಪ್ರೊ. ಕೆ. ಎಸ್. ಭಗವಾನ್ ಅವರ ‘ರಾಮ ಮಂದಿರ ಏಕೆ ಬೇಡ?’ ಎಂಬ ಪುಸ್ತಕದಲ್ಲಿ ವಿವಾದಾಸ್ಪದ ಅಂಶಗಳಿವೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 28). ಕೆಲ ವಿಚಾರವಾದಿಗಳು, ಬುದ್ಧಿಜೀವಿಗಳು ತಾವು ಕಂಡದ್ದೇ ಸತ್ಯವೆಂದು ತಮ್ಮ ಮೂಗಿನ ನೇರಕ್ಕೆ ಪ್ರತಿಪಾದಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ವಿಲಕ್ಷಣ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ದೇವರು, ಧರ್ಮ, ಆಧ್ಯಾತ್ಮಿಕತೆ ಇವೆಲ್ಲವೂ ಅವರವರ ವೈಯಕ್ತಿಕ ನಂಬಿಕೆ ಮತ್ತು ಶ್ರದ್ಧೆಗಳಿಗೆ ಬಿಟ್ಟ ವಿಚಾರ. ಪುರಾಣಪುರುಷರ ವಿಚಾರದಲ್ಲಿ ಯಾವುದೋ ಶ್ಲೋಕವನ್ನು ಆಧಾರವಾಗಿಟ್ಟುಕೊಂಡು ಹಗುರವಾಗಿ ಮಾತನಾಡುವುದು, ಬರೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿನಿಧಿಸುವ ಗೀಳಾದೀತೇ ಹೊರತು ಮಾನವತೆಯ ಸಾಮರಸ್ಯಕ್ಕೆ ಸಹಕಾರಿಯಾಗುವುದಿಲ್ಲ.
ತಾನು ನಂಬಿದ ಪುರಾಣಪುರುಷರ ಜೀವನಶೈಲಿಯ ಇಣುಕುನೋಟಕ್ಕೆ ಬಲಿಯಾಗದೆ, ತನ್ನ ನಂಬಿಕೆ, ಶ್ರದ್ಧೆಯಿಂದಲೇ ಅವರನ್ನು ಆರಾಧಿಸುವ ಆಸ್ತಿಕರು ಅತಿ ವಿಚಾರವಂತರ ಇಂತಹ ಮಾತು, ಬರಹಗಳಿಂದ ಯಾವತ್ತೂ ವಿಚಲಿತರಾಗುವುದಿಲ್ಲ. ಅದು ಅವರ ಭಾವ, ಭಕ್ತಿಯ ಗಟ್ಟಿತನ. ಈಗ ನಮಗೆ ಬೇಕಿರುವುದು ದೇವರು, ಧರ್ಮದ ವಿಚಾರವನ್ನು ಕೆದಕಿ ಮಾನವ ಸಂಬಂಧಗಳನ್ನು ಹದಗೆಡಿಸುವ ವಿಚಾರವಂತಿಕೆಯಲ್ಲ. ಬದಲು ಜಾತ್ಯತೀತವಾದ, ಧರ್ಮಾತೀತವಾದ ಕೇವಲ ಮಾನವತೆಯನ್ನು ಸಾರುವ, ಮನುಷ್ಯ ಮನುಷ್ಯರ ನಡುವೆ ಸೌಹಾರ್ದ, ಪ್ರೀತಿ- ವಿಶ್ವಾಸವನ್ನು ಗಟ್ಟಿಗೊಳಿಸುವ ಹೃದಯವಂತಿಕೆ. ಸಾಮಾಜಿಕ, ಆಸ್ತಿಕ ಸ್ವಾಸ್ಥ್ಯವನ್ನು ಕೆಡಿಸುವ ಪ್ರಯತ್ನಗಳು ದೀರ್ಘಕಾಲ ಬಾಳಲಾರವು, ಯಶಸ್ಸನ್ನು ಕಾಣಲಾರವು.
-ಧರ್ಮಾನಂದ ಶಿರ್ವ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.