ADVERTISEMENT

ಸಂದರ್ಶನರಹಿತ ಲಿಖಿತ ಪರೀಕ್ಷೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 20:03 IST
Last Updated 15 ಡಿಸೆಂಬರ್ 2019, 20:03 IST

ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳ ಅಧ್ಯಾಪಕರನ್ನು ಲಿಖಿತ ಪರೀಕ್ಷೆ ಮೂಲಕ ಸಂದರ್ಶನದ ಗೊಡವೆ ಇಲ್ಲದೆ ಆಯ್ಕೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಇದೊಂದು ಅತ್ಯಂತ ಅವಶ್ಯವಾದ ಮತ್ತು ಪದವಿ ಕಾಲೇಜು, ವಿಶ್ವವಿದ್ಯಾಲಯಗಳ ಅಧ್ಯಾಪಕ ಹುದ್ದೆಯ ಆಕಾಂಕ್ಷಿಗಳು ಖುಷಿಪಡುವ ಸಂಗತಿ.

ಆಯಾ ಸ್ನಾತಕೋತ್ತರ ವಿಷಯದ ಮೇಲ್ಪದರದ ವಿವರಗಳನ್ನು ನೆನಪಿಟ್ಟುಕೊಂಡು ಆಯ್ಕೆ ಮಾಡುವ ಬಹುಆಯ್ಕೆ ಮಾದರಿಯ ಪರೀಕ್ಷೆಯನ್ನು ಬಿಟ್ಟು, ಪದವೀಧರರು ಆಯಾ ವಿಷಯವನ್ನು ಎಷ್ಟು ಆಳವಾಗಿ ಅಧ್ಯಯನ ಮಾಡಿದ್ದಾರೆ, ಈ ಓದು, ಅಧ್ಯಯನದ ಪರಿಣಾಮವಾಗಿ ಆಯಾ ವಿಷಯದಲ್ಲಿ ಹೊಸತೇನನ್ನು ಕಂಡುಕೊಂಡಿದ್ದಾರೆ, ಅವರ ಬರಹ, ಸಂಶೋಧನೆಗಳಲ್ಲಿ ತಾವು ಕಲಿತ ಸ್ನಾತಕೋತ್ತರ ಪದವಿಯ ವಿಷಯವನ್ನು ಹೇಗೆ ಸಮಾಜಮುಖಿಯಾಗಿ ಬಳಸಿಕೊಂಡಿದ್ದಾರೆ ಎನ್ನುವುದನ್ನು ಪರೀಕ್ಷಿಸಬೇಕು. ಈ ಎಲ್ಲಾ ಆಯಾಮಗಳನ್ನು ಗುರುತಿಸಲು ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ಲಿಖಿತ ಪರೀಕ್ಷೆಯನ್ನು ಏರ್ಪಡಿಸಬೇಕು. ಅಂತೆಯೇ 2018ರ ಯುಜಿಸಿ ನಿಯಮಾವಳಿಯ ಪ್ರಕಾರ, ಅಕಾಡೆಮಿಕ್ ಸಂಶೋಧನೆ, ಅಧ್ಯಾಪನ, ಪ್ರಕಟಣೆ, ಸೆಮಿನಾರ್ ಮೊದಲಾದ ಚಟುವಟಿಕೆಗಳಿಗೂ ಅಂಕ ನೀಡಿ, ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಜೊತೆಗೆ ಸೇರಿಸಿ ಶ್ರೇಣಿಯನ್ನು ಪರಿಗಣಿಸಬೇಕು. ಹಾಗಾದಲ್ಲಿ, ಸಮರ್ಥ ಅಧ್ಯಾಪಕರ ಆಯ್ಕೆಯ ಸಾಧ್ಯತೆ ಹೆಚ್ಚಾಗಿರುತ್ತದೆ.

ಅರುಣ್ ಜೋಳದಕೂಡ್ಲಿಗಿ, ಕಮಲಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.