‘ಸಚಿವ ಸ್ಥಾನ ಕೇಳುವುದು ನಮ್ಮ ಹಕ್ಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕಾರಣರಾದ ಎಲ್ಲ ಶಾಸಕರು ಒಟ್ಟಾಗಿದ್ದೇವೆ’ ಎಂದು ಎಚ್.ವಿಶ್ವನಾಥ್ ಹೇಳಿರುವುದು ವರದಿಯಾಗಿದೆ
(ಪ್ರ.ವಾ., ಜ. 14). ಉಪಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಯಿಂದ ಇಂತಹ ಹೇಳಿಕೆ ಬಂದಿರುವುದು ತಮಾಷೆ ಎನಿಸುತ್ತದೆ. ಅದಕ್ಕಿಂತ ಹೆಚ್ಚಾಗಿ, ಸಚಿವ ಸ್ಥಾನ ಕೇಳುವುದು ಹೇಗೆ ಅವರ ಹಕ್ಕಾಗುತ್ತದೆ? ಸಂವಿಧಾನದ ಯಾವ ವಿಧಿಯಲ್ಲಿ ಅಥವಾ ಯಾವ ಪಕ್ಷದ ಸಂಹಿತೆಯಲ್ಲಿ ಇಂತಹ ಹಕ್ಕನ್ನು ಪ್ರಸ್ತಾಪಿಸಲಾಗಿದೆ?
ವಿಶ್ವನಾಥ್ ಅವರು ಹಾಗೆ ಹೇಳುತ್ತಿರುವುದು ನಮ್ಮ ರಾಜಕೀಯ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಅವರೆಲ್ಲ ಒಗ್ಗಟ್ಟಾಗಿದ್ದಾರೆ ಅಂದರೆ, ಈ ಸರ್ಕಾರವು ಸುಭದ್ರವಲ್ಲ, ಮತ್ತೊಂದು ರಾಜಕೀಯ ಪ್ರಹಸನಕ್ಕೆ ರಾಜ್ಯದ ಜನರು ಸಿದ್ಧರಾಗಬೇಕಾಗಿದೆ ಎಂದು ಅರ್ಥವೇ?
ದರ್ಶನ್ ಕೆ.ಓ., ಕಾರನಘಟ್ಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.