ಕೇಂದ್ರದಲ್ಲಿ ಎಂಟು ವರ್ಷಗಳ ಆಡಳಿತವನ್ನು ಸಾಧನೆ ಎಂಬಂತೆ ಸಂಭ್ರಮಿಸಲು ಬಿಜೆಪಿ ಎಲ್ಲ ಸಿದ್ಧತೆ ನಡೆಸಿದೆ ಎಂಬ ಸುದ್ದಿ (ಪ್ರ.ವಾ. ಮೇ 12) ಓದಿದಾಗ, ಇಂದಿನ ದಿನಗಳಲ್ಲಿ ಆತ್ಮಾವಲೋಕನ ಎಂಬುದು ಇಲ್ಲವೇ ಇಲ್ಲ ಎನಿಸುತ್ತದೆ. ಅಥವಾ ಹೇಗಾದರೂ ಅಧಿಕಾರದಲ್ಲಿರುವುದೇ ಅರ್ಹತೆ ಮತ್ತು ಸಾಧನೆ ಎಂದು ರಾಜಕೀಯ ಪಕ್ಷಗಳು ಭಾವಿಸುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನ ಆಗಬಹುದು. ಜನತೆಗೆ ಒಳಿತನ್ನು ಮಾಡಲು ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ ಎಂದು ಹೇಳಿಕೊಳ್ಳುವವರು ಆ ದಿಸೆಯಲ್ಲಿ ಏನೆಲ್ಲಾ ಆಗಿದೆ ಎಂದು ವಿಮರ್ಶೆಯನ್ನಾದರೂ ಗಂಭೀರವಾಗಿ ಮಾಡಿಕೊಳ್ಳಬೇಕು ಅಥವಾ ಉಳಿದವರು ಹೇಳುವುದನ್ನು ಸಾವಧಾನದಿಂದ ಕೇಳಿ ತಪ್ಪುಗಳನ್ನು ತಿದ್ದಿಕೊಳ್ಳುವ ವಿನಯವನ್ನು ಮೈಗೂಡಿಸಿಕೊಳ್ಳಬೇಕು. ಹೀಗಾದಲ್ಲಿ ಮಾತ್ರ ಅಧಿಕಾರಕ್ಕೆ ಮೌಲ್ಯ ಬರುತ್ತದೆ.
ಸಾಧನೆಗಳು ಒಂದೆಡೆ ಇರಲಿ, ಕೋಮು ಕೋಮುಗಳ ನಡುವೆ ವಿನಾಕಾರಣ ದ್ವೇಷ, ಅಸಹನೆ, ತಿರಸ್ಕಾರ ದಿನೇ ದಿನೇ ಹೆಚ್ಚಾಗುತ್ತ ಸಮಾಜದ ಆರೋಗ್ಯ ಹದಗೆಡುತ್ತಿರುವುದನ್ನು ಎಲ್ಲರೂ ಕಾಣುತ್ತಿದ್ದೇವೆ. ದಿನನಿತ್ಯದ ಜನಸಾಮಾನ್ಯರ ಬವಣೆಗಳಿಗೆ ತುರ್ತಾಗಿ ಸ್ಪಂದಿಸುವುದು ಜವಾಬ್ದಾರಿಯುತ ಸರ್ಕಾರದ ಆದ್ಯತೆ ಆಗದಿದ್ದರೆ ಅದೆಂಥ ಜನಪರ ಆಡಳಿತವಾದೀತು? ಅಥವಾ ಅಂತಹ ನಿರೀಕ್ಷೆ ಇಟ್ಟುಕೊಳ್ಳುವುದೇ ಮೂರ್ಖತನವೇ? ಸಂಭ್ರಮಪಡಲು ಅವರದ್ದೇ ಕಾರಣಗಳಿರಬಹುದು. ಆದರೆ ಆತ್ಮವಿಮರ್ಶೆಗೂ ಅವಕಾಶವಾಗಲಿ ಎಂದು ಆಶಿಸೋಣ.
ಎಚ್.ವಿ.ನಟರಾಜ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.